ವಿಜೇಂದರ್ ಸಿಂಗ್ ಸೋಲಿಸಲು ಹಂಗೇರಿ ಬಾಕ್ಸರ್ ಪಣ

ವೃತ್ತಿಪರ ಬಾಕ್ಸಿಂಗ್ ನಲ್ಲಿ ಗೆಲುವಿನ ಸರಣಿ ಮುಂದುವರೆಸಿರುವ ಭಾರತ ಬಾಕ್ಸರ್ ವಿಜೇಂದರ್ ಸಿಂಗ್ ರನ್ನು ಶತಾಯಗತಾಯ ಸೋಲಿಸುವುದಾಗಿ ಹಂಗೇರಿ ಬಾಕ್ಸರ್ ಅಲೆಕ್ಸಾಂಡರ್ ಹೊರ್ವಾತ್ ಹೇಳಿದ್ದಾರೆ...
ಭಾರತದ ವಿಜೇಂದರ್ ಸಿಂಗ್ ಹಾಗೂ ಹಂಗೆರಿಯ ಹೊರ್ವಾತ್ (ಸಂಗ್ರಹ ಚಿತ್ರ)
ಭಾರತದ ವಿಜೇಂದರ್ ಸಿಂಗ್ ಹಾಗೂ ಹಂಗೆರಿಯ ಹೊರ್ವಾತ್ (ಸಂಗ್ರಹ ಚಿತ್ರ)

ನವದೆಹಲಿ: ವೃತ್ತಿಪರ ಬಾಕ್ಸಿಂಗ್ ನಲ್ಲಿ ಗೆಲುವಿನ ಸರಣಿ ಮುಂದುವರೆಸಿರುವ ಭಾರತ ಬಾಕ್ಸರ್ ವಿಜೇಂದರ್ ಸಿಂಗ್ ರನ್ನು ಶತಾಯಗತಾಯ ಸೋಲಿಸುವುದಾಗಿ ಹಂಗೇರಿ ಬಾಕ್ಸರ್  ಅಲೆಕ್ಸಾಂಡರ್ ಹೊರ್ವಾತ್ ಹೇಳಿದ್ದಾರೆ.

ಇದಕ್ಕಾಗಿ ಅವರು ಸಾಕಷ್ಟು ಪೂರ್ವ ತಯಾರಿ ನಡೆಸಿದ್ದು, ಬಾಕ್ಸಿಂಗ್ ರಿಂಗ್ ನಲ್ಲಿ ಖಂಡಿತ ವಿಜೇಂದರ್ ಸಿಂಗ್ ರನ್ನು ಸೋಲಿಸುವ ವಿಶ್ವಾಸ ವಕ್ತಪಡಿಸಿದ್ದಾರೆ. ಇದೇ ಮಾರ್ಚ್ 12 ರಂದು ಲಿವರ್  ಪೂಲ್ ನಲ್ಲಿ ವಿಜೇಂದರ್ ಮತ್ತು ಹೊರ್ವಾತ್ ಪರಸ್ಪರ ಸೆಣಸಲಿದ್ದಾರೆ. ಇನ್ನು ಬಾಕ್ಸಿಂಗ್ ಪಂದ್ಯಕ್ಕೆ ಸಕಲ ರೀತಿಯಲ್ಲೂ ಸಜ್ಜಾಗುತ್ತಿರುವ ಹೊರ್ವಾತ್ ತಾಲೀಮಿನಲ್ಲಿ ಹಾವಿನ ರಕ್ತ ಕುಡಿಯು  ಅಭ್ಯಾಸ ಮಾಡಿಕೊಂಡಿದ್ದಾರೆ. ಹಾವಿನ ರಕ್ತ ತಮ್ಮಲ್ಲಿ ವಿಶೇಷ ಶಕ್ತಿ ನೀಡುವ ಕಾರಣ, ಭೋಜನದ ವೇಳೆ ಇದನ್ನು ಸೇವಿಸುತ್ತಿರುವುದಾಗಿ 20 ವರ್ಷದ ಬಾಕ್ಸರ್ ವಿವರಿಸಿದ್ದಾರೆ.

‘ಹಾವಿನ ಹಸಿ ರಕ್ತವನ್ನು ಕುಡಿಯುವ ಸಂಪ್ರದಾಯ ಶತಮಾನಗಳ ಕಾಲದಿಂದಲೂ ನಮ್ಮ ಕುಟುಂಬದಲ್ಲಿದೆ. ನನ್ನ ಅಜ್ಜ, ಮುತ್ತಜ್ಜ ಕೂಡ ಇದನ್ನು ಸೇವಿಸುತ್ತಿದ್ದರು. ಇದರಿಂದ ನಮ್ಮಿಂದ  ಗೆಲುವನ್ನು ಯಾರಿಂದಲೂ ಕಸಿಯಲು ಸಾಧ್ಯವಾಗದೇ ಇರುವ ಬಲ ಬರುತ್ತದೆ. ಟರ್ಕಿ ಸೈನಿಕರನ್ನು ಸೋಲಿಸುವ ಸಲುವಾಗಿ ಹಂಗೆರಿ ಸೈನಿಕರು ಹಾವಿನ ರಕ್ತವನ್ನು ಕುಡಿಯುತ್ತಿದ್ದರು. ಈಗ ನಾನು  ವಿಜೇಂದರ್‌ರನ್ನು ಸೋಲಿಸಲು ಇದನ್ನು ಸೇವಿಸುತ್ತಿದ್ದೇನೆ’ ಎಂದು ಹೊರ್ವಾತ್ ಹೇಳಿದ್ದಾರೆ.

‘ನಮ್ಮನ್ನು ಭಯಬೀಳಿಸುವ ಇಂಥ ಪ್ರಾಣಿಗಳ ರಕ್ತ ಕುಡಿಯುವುದರಿಂದ ಅಸಾಧಾರಣ ಶಕ್ತಿ ಸಿಗುತ್ತದೆ. ನನ್ನ ದೇಹದೊಳಗೆ ಹಾವಿನ ರಕ್ತ ಇದ್ದರೆ, ವಿಜೇಂದರ್‌ಗೆ ನನ್ನನ್ನು ಸೋಲಿಸಲು ಸಾಧ್ಯವೇ  ಇಲ್ಲ. ನನ್ನ ಭೋಜನದಲ್ಲಿ ಹಾವಿನ ರಕ್ತವನ್ನು ಸೇರಿಸಿದ ಬಳಿಕ, ಇನ್ನಷ್ಟು ಶ್ರಮವಹಿಸಿ ಅಭ್ಯಾಸ ನಡೆಸಲು ಸಾಧ್ಯವಾಗಿದ್ದು, ಸಾಕಷ್ಟು ಬಲಿಷ್ಠ ಪಂಚ್‌ಗಳು ನನ್ನ ಕೈಯಿಂದ ಬರುತ್ತಿದೆ’ ಎಂದು  ಹೊರ್ವಾತ್ ಹೇಳಿದ್ದಾರೆ.

ಒಟ್ಟಾರೆ ವೃತ್ತಿಪರ ಬಾಕ್ಸಿಂಗ್ ನಲ್ಲಿ ಕೇವಲ ಮೂರೇ ಪಂದ್ಯಗಳನ್ನೂ ಆಡಿದ್ದರೂ, ಆಡಿದ ಅಷ್ಟೂ ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತದ ವಿಜೇಂದರ್ ಸಿಂಗ್ ವಿಶ್ವದ ನಾನಾ ಬಾಕ್ಸರ್ ಗಳ  ನಿದ್ದೆಕದ್ದಿದ್ದಾರೆ. ಮಾರ್ಚ್ 12 ರಂದು ನಡೆಯಲಿರುವ 4ನೇ ಪಂದ್ಯವನ್ನೂ ಗೆದ್ದು ಇತಿಹಾಸ ಬರೆಯಲಿ ಎಂದು ಅವರ ಅಭಿಮಾನಿಗಳು ಹಾರೈಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com