ಶೋಯಿಬ್ ಅಖ್ತರ್
ಕ್ರೀಡೆ
ಶಾಹಿದ್ ಅಫ್ರಿದಿ ಬಳಿಕ ಕಾಶ್ಮೀರ ವಿಚಾರ ಕುರಿತು ಶೋಯಿಬ್ ಅಖ್ತರ್ ಟ್ವೀಟ್
ಕಾಶ್ಮೀರ ವಿವಾದ ಕುರಿತು ಟ್ವೀಟ್ ಮಾಡಿದ್ದ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿಯವರು ತೀವ್ರ ಟೀಕೆಗಳಿಗೆ ಗುರಿಯಾಗಿದ್ದರು. ಇದರ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಕುರಿತು ಮಾಜಿ ಕ್ರಿಕೆಟಿಗ ಶೋಯಿಬ್ ಅಖ್ತರ್ ಅವರು ಹೇಳಿಕೆಯೊಂದನ್ನು ನೀಡಿದ್ದಾರೆ...
ಇಸ್ಲಾಮಾಬಾದ್; ಕಾಶ್ಮೀರ ವಿವಾದ ಕುರಿತು ಟ್ವೀಟ್ ಮಾಡಿದ್ದ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿಯವರು ತೀವ್ರ ಟೀಕೆಗಳಿಗೆ ಗುರಿಯಾಗಿದ್ದರು. ಇದರ ಬೆನ್ನಲ್ಲೇ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಕುರಿತು ಮಾಜಿ ಕ್ರಿಕೆಟಿಗ ಶೋಯಿಬ್ ಅಖ್ತರ್ ಅವರು ಹೇಳಿಕೆಯೊಂದನ್ನು ನೀಡಿದ್ದಾರೆ.
ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ಅಖ್ತರ್ ಅವರು, ಉಭಯ ರಾಷ್ಟ್ರಗಳ ಯುವಕರು ಒಗ್ಗಟ್ಟಿನಿಂದ ನಿಂತು ಹಲವು ವರ್ಷಗಳಿಂಗ ಬಗೆಹರಿಯದೇ ಉಳಿದಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಆಗ್ರಹಿಸಬೇಕೆಂದು ಹೇಳಿದ್ದಾರೆ.
ಎರಡೂ ರಾಷ್ಟ್ರಗಳ ಯುವಕರು ಭಾರತ ಮತ್ತು ಪಾಕಿಸ್ತಾನ ಸಂಬಂಧಕ್ಕಾಗಿ ಒಗ್ಗಟ್ಟಿನಿಂದ ನಿಲ್ಲಬೇಕು ಮತ್ತು 70 ವರ್ಷಗಳಿಂದ ಬಗೆಹರಿಯದೇ ಉಳಿದಿರುವ ಸಮಸ್ಯೆಗಳನ್ನು ಬಗೆಹರಿಸುವಂತೆ ಅಧಿಕಾರಿಗಳಿಗೆ ಆಗ್ರಹಿಸಬೇಕು. ಈ ದ್ವೇಷದಿಂದಲೇ ಮತ್ತೆ 70 ವರ್ಷಗಳ ಕಾಲ ಜೀವನ ನಡೆಸಲು ನೀವು ಸಿದ್ಧರಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಕಾಶ್ಮೀರಿಗರ ಹಿತಾಸಕ್ತಿಗನುಗುಣವಾಗಿ ಕಾಶ್ಮೀರ ಸಮಸ್ಯೆಯನ್ನು ಬಗೆಹರಿಸಬೇಕಿದೆ. ವಿಶ್ವಸಂಸ್ಥೆ ನಿರ್ಣಯದ ಮಾನದಂಡಗಳೊಳಗೆ ಎರಡೂ ದೇಶಗಳು ಸಮಸ್ಯೆಯನ್ನು ಬಗೆಹರಿಸಬೇಕು. ಮುಸ್ಲಿಮರಾಗಲೀ ಅಥವಾ ಮುಸ್ಲಿರಲ್ಲದ ಯಾವುದೇ ಜನರಾಗಲೀ ಮನುಷ್ಯನ ಜೀವನ ಅತ್ಯಂತ ಮುಖ್ಯವಾದದ್ದು. ದ್ವೇಷವನ್ನು ಬಿಟ್ಟು ಪ್ರೀತಿಯಿಂದ ನೋಡುವುದನ್ನು ಕಲಿಯಿರಿ ಎಂದು ತಿಳಿಸಿದ್ದಾರೆ.
ಕಾಶ್ಮೀರದಲ್ಲಿ ಭಾರತೀಯ ಸೇನೆ 13 ಉಗ್ರರನ್ನು ಹೊಡೆದುರುಳಿಸಿತ್ತು. ಈ ಹಿನ್ನಲೆಯಲ್ಲಿ ಕಾಶ್ಮೀರ ವಿವಾದ ಕುರಿತಂತೆ ಟ್ವೀಟ್ ಮಾಡಿದ್ದ ಅಫ್ರಿದಿಯವರು, ಪಿಒಕೆಯನ್ನು ಭಾರತ ಆಕ್ರಮಿತ ಕಾಶ್ಮೀರ ಎಂದು ಕರೆದಿದ್ದರು. ಭಾರತ ಆಕ್ರಮಿತ ಕಾಶ್ಮೀರದಲ್ಲಿ ಹಿಂಸಾಚಾರ ನಡೆಯುತ್ತಿದೆ. ಅಲ್ಲಿನ ಪರಿಸ್ಥಿತಿ ಚಿಂತಾಜನಕವಾಗಿದ್ದು, ಸಾರ್ವಜನಿಕರಿಗೆ ಭಾರೀ ತೊಂದರೆಯಾಗುತ್ತಿದೆ. ವಿಶ್ವಸಂಸ್ಥೆ (ಯುಎನ್) ಹಾಗೂ ಇನ್ನಿತರೆ ಸಂಸ್ಥೆಗಳು ರಕ್ತಪಾತವನ್ನು ನಿಲ್ಲಿಸಲು ಏಕೆ ಪ್ರಯತ್ನಿಸುತ್ತಿಲ್ಲ ಎಂದು ಬರೆದುಕೊಂಡಿದ್ದರು. ಇದಕ್ಕೆ ಪಾಕಿಸ್ತಾನಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. ಭಾರತೀಯರಿಂದ ಭಾರೀ ಟೀಕೆಗಳು ವ್ಯಕ್ತವಾಗತೊಡಗಿದ್ದವು.

