ನವದೆಹಲಿ: 'ಐ ರಿಟೈರ್' ಪೋಸ್ಟ್ ಮೂಲಕ ತಮ್ಮ ಅಭಿಮಾನಿಗಳಿಗೆ ಆಘಾತ ನೀಡಿದ್ದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ತಾನೀಗ ಸಂಪೂರ್ಣ ಫಿಟ್ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ಕೇವಲ ಆರೋಗ್ಯ ದೃಷ್ಟಿಯಿಂದಲ್ಲದೆ ಅಂಗಣಕ್ಕಿಳಿಯಲು ಸಜ್ಜಾಗಿದ್ದು, ಮುಂಬರುವ ಟೂರ್ನಿಗಳಲ್ಲಿ ಸ್ಪರ್ಧಿಸಲು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಅವರು, ಕೋವಿಡ್-19 ಸಂದರ್ಭದಲ್ಲಿ ಎದುರಿಸಿದ ಮಾನಸಿಕ ತಳಮಳ, ಟೋಕಿಯೊ ಒಲಿಂಪಿಕ್ಸ್ ಮುಂದೂಡಿಕೆ, ಮುಂಬರುವ ಏಷ್ಯಾ ಕಪ್ಗೆ ಸಿದ್ಧತೆ, ರಾಷ್ಟ್ರೀಯ ಬ್ಯಾಡ್ಮಿಂಟನ್ ಕೋಚ್ ಪುಲ್ಲೇಲ ಗೋಫಿಚಂದ್ ಜತೆಗಿನ ಸಂಬಂಧ ಇತ್ಯಾದಿ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ದೈನಂದಿನ ದಿನಚರಿಯನ್ನು ಏಕಾಏಕಿ ಸ್ಥಗಿತಗೊಳಿಸಬೇಕಾದ ಸಂದರ್ಭ ಎದುರಾದಾಗ ತುಂಬಾ ಕಠಿಣವಾಯಿತು. ಆದರೆ ಎಲ್ಲದಕ್ಕೂ ಬಿಡುವು ನೀಡಿ ನಮ್ಮ ಬಗ್ಗೆ ನಾವು ಜಾಗೃತಿ ವಹಿಸೋದು ಎಷ್ಟು ಮಹತ್ವದ ವಿಚಾರ ಎನ್ನುವುದು ಇದೇ ಸಮಯದಲ್ಲಿ ನನಗೆ ಅರ್ಥವಾಯಿತು ಎಂದು ಕಳೆದ ಮಾರ್ಚ್ನಲ್ಲಿ ದೇಶಾದ್ಯಂತ ಹೇರಲಾದ ಲಾಕ್ಡೌನ್ ಸಂದರ್ಭದಲ್ಲಿ ಎದುರಿಸಿದ ತೊಳಲಾಟವನ್ನು ಸಿಂಧು ವಿವರಿಸಿದ್ದಾರೆ.
"ಮನೆಯಲ್ಲಿಯೇ ಕೆಲಸ ಮಾಡುವ ಮೂಲಕ ಸಕ್ರಿಯವಾಗಿರಲು ನಾನು ಯತ್ನಿಸಿದೆ. ಇದು ನಿಜವಾಗಿಯೂ ನನಗೆ ನೆರವಾಯಿತು. ನಾನು ನನ್ನ ಕುಟುಂಬದೊಂದಿಗೆ ಸಾಕಷ್ಟು ಸಮಯ ಕಳೆದಿದ್ದೇನೆ. ಹಾಗೆಯೇ ಚಿತ್ರಕಲೆಯಂತಹ ಕೆಲವು ಹವ್ಯಾಸಗಳನ್ನು ಅಭ್ಯಾಸ ಮಾಡಿದೆ" ಎಂದು ಒಲಿಂಪಿಕ್ ಪದಕ ವಿಜೇತೆ ಸಿಂಧು ನುಡಿದಿದ್ದಾರೆ.
ತಾವು ಸಂಪೂರ್ಣ ಫಿಟ್ ಆಗಿರುವುದಾಗಿ ಹೇಳಿರುವ ಸಿಂಧು, ಮುಂಬರುವ ಟೂರ್ನಿಗಳಿಗೆ ಸಜ್ಜಾಗುತ್ತಿದ್ದು, ಕೋಚ್ ಗೋಪಿಚಂದ್ ಜತೆಗಿನ ವಿವಾದಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಹಾಗೆಯೇ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವ ರಿಯೊ ಒಲಿಂಪಿಕ್ಸ್ ಕೂಟಕ್ಕೆ ಈಗಾಗಲೇ ತಾವು ಮಾನಸಿಕವಾಗಿ ಸದೃಢಗೊಂಡಿರುವುದಾಗಿಯೂ ತಿಳಿಸಿದ್ದಾರೆ.
Advertisement