ಬೆಂಗಳೂರು: ಟೋಕಿಯೊ ಒಲಿಂಪಿಕ್ಸ್ನ ಜಾವೆಲಿನ್ ಥ್ರೊ ಬಂಗಾರದ ಪದಕ ವಿಜೇತ ನೀರಜ್ ಚೋಪ್ರಾ ನೀರಿನಾಳದಲ್ಲಿ ಜಾವೆಲಿನ್ ಥ್ರೋ ಎಸೆತ ತಾಲೀಮು ನಡೆಸಿದ್ದಾರೆ.
ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆದ್ದು ರಾಷ್ಟ್ರೀಯ ಕೂಟದಲ್ಲಿ ನಿರತರಾಗಿದ್ದ ನೀರಜ್ ಚೋಪ್ರಾ ಇದೀಗ ವಿಶ್ರಾಂತಿಯಲ್ಲಿ ತೊಡಗಿದ್ದು, ಮಾಲ್ಡೀವ್ಸ್ ನಲ್ಲಿ ಬೀಡುಬಿಟ್ಟಿದ್ದಾರೆ. ಸದ್ಯ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿರುವ ಅವರು ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಈ ವೇಳೆಯೂ ಅವರು ಜಾವೆಲಿನ್ ಥ್ರೋ ತಾಲೀಬು ನಡೆಸಿದ್ದಾರೆ.
ನೀರಿನಾಳದಲ್ಲಿ ಡೈವಿಂಗ್ ಮಾಡುತ್ತಿರುವ (ಸ್ಕೂಬಾ ಡೈವಿಂಗ್) ವಿಡಿಯೊ ಒಂದನ್ನು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹಂಚಿಕೊಂಡಿರುವ ನೀರಜ್, ನೀರಿನಾಳದಲ್ಲಿ ಜಾವೆಲಿನ್ ಎಸೆದು ವಿಜಯದ ಸಂಕೇತ ತೋರಿಸಿದ್ದಾರೆ. ಅಸಲಿಗೆ ಅಲ್ಲಿ ಜಾವೆಲಿನ್ ಇರಲಿಲ್ಲ. ಜಾವೆಲಿನ್ ಎಸೆಯುವ ಹಾಗೇ ಅಭಿನಯಿಸಿ ಎಲ್ಲರ ಮನಗೆದ್ದಿದ್ದಾರೆ. ಈ ವೇಳೆ ಹಿನ್ನೆಲೆಯಲ್ಲಿ ಎ.ಆರ್ ರೆಹಮಾನ್ ಅವರ 'ವಂದೇ ಮಾತರಂ' ಗೀತೆ ಕೇಳಿ ಬಂದಿದೆ.
'ನಾನು ಯಾವಾಗಲೂ ಜಾವೆಲಿನ್ ಬಗ್ಗೆಯೇ ವಿಚಾರ ಮಾಡುತ್ತೇನೆ ಎಂದು ತಮ್ಮ ವಿಶೇಷ ವಿಡಿಯೋಗೆ ' ಎಂದು ತಮ್ಮ ನೀರಿನಾಳದ ವಿಡಿಯೊಕ್ಕೆ ನೀರಜ್ ಚೋಪ್ರಾ ಒಕ್ಕಣಿಕೆ ಬರೆದುಕೊಂಡಿದ್ದಾರೆ.
ಕಳೆದ ಆಗಸ್ಟ್ನಲ್ಲಿ ನಡೆದಿದ್ದ ಟೋಕಿಯೊ ಒಲಿಂಪಿಕ್ಸ್ನಲ್ಲಿ ಕೇವಲ 23 ನೇ ವಯಸ್ಸಿನಲ್ಲಿ ನೀರಜ್ ಚೋಪ್ರಾ 87.58 ಮೀಟರ್ ದೂರ ಜಾವೆಲಿನ್ ಎಸೆದು ಬಂಗಾರದ ಪದಕ ಪಡೆದಿದ್ದರು. ನೀರಜ್ ಚೋಪ್ರಾ ವೈಯುಕ್ತಿಕ ವಿಭಾಗದಲ್ಲಿ ಬಂಗಾರದ ಪದಕ ಪಡೆದ ಭಾರತದ ಎರಡನೇ ಕ್ರೀಡಾಪಟು ಎಂಬ ಹಿರಿಮೆಗೆ ಪಾತ್ರರಾಗಿದ್ದರು.
Advertisement