'ಅಮೂಲ್ಯ 1 ವರ್ಷ ಹಾಳು': ಅಸೋಸಿಯೇಷನ್ ವಿರುದ್ಧ ಪ್ರತಿಭಟಿಸಿದ್ದ ಹಿರಿಯ ರೆಸ್ಲರ್ ಗಳ ವಿರುದ್ಧ ಜೂನಿಯರ್ ಗಳ ಪ್ರತಿಭಟನೆ

ರೆಸ್ಲಿಂಗ್ ಅಸೋಸಿಯೇಷನ್ ವಿರುದ್ಧ ಪ್ರತಿಭಟಿಸಿದ್ದ ಹಿರಿಯ ರೆಸ್ಲರ್ ಗಳಾದ ಸಾಕ್ಷಿ ಮಲ್ಲಿಕ್, ವಿನೇಶ್ ಪೋಗಟ್ ಸೇರಿದಂತೆ ಹಿರಿಯ ರೆಸ್ಲರ್ ಗಳ ವಿರುದ್ಧ ಜೂನಿಯರ್ ರೆಸ್ಲರ್ ಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಹಿರಿಯ ರೆಸ್ಲರ್ ಗಳ ವಿರುದ್ಧ ಕಿರಿಯ ರೆಸ್ಲರ್ ಗಳ ಪ್ರತಿಭಟನೆ
ಹಿರಿಯ ರೆಸ್ಲರ್ ಗಳ ವಿರುದ್ಧ ಕಿರಿಯ ರೆಸ್ಲರ್ ಗಳ ಪ್ರತಿಭಟನೆ
Updated on

ನವದೆಹಲಿ: ರೆಸ್ಲಿಂಗ್ ಅಸೋಸಿಯೇಷನ್ ವಿರುದ್ಧ ಪ್ರತಿಭಟಿಸಿದ್ದ ಹಿರಿಯ ರೆಸ್ಲರ್ ಗಳಾದ ಸಾಕ್ಷಿ ಮಲ್ಲಿಕ್, ವಿನೇಶ್ ಪೋಗಟ್ ಸೇರಿದಂತೆ ಹಿರಿಯ ರೆಸ್ಲರ್ ಗಳ ವಿರುದ್ಧ ಜೂನಿಯರ್ ರೆಸ್ಲರ್ ಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಭಾರತ ಕುಸ್ತಿ ಒಕ್ಕೂಟದ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ತೀವ್ರ ಹೋರಾಟ ನಡೆಸುತ್ತಿರುವ ಕುಸ್ತಿಪಟುಗಳಾದ ಬಜರಂಗ್‌ ಪುನಿಯ, ವಿನೇಶ್‌ ಫೋಗಟ್‌, ಸಾಕ್ಷಿ ವಿರುದ್ಧವೇ ಕೆಲವು ರಾಜ್ಯಗಳ ಕುಸ್ತಿಪಟುಗಳು ತಿರುಗಿಬಿದ್ದಿದ್ದಾರೆ. ಈ ಮೂವರು ನಕಲಿ ಪ್ರತಿಭಟನೆ ನಡೆಸುತ್ತಿದ್ದಾರೆ, ಇವರು ದೇಶದ ಕುಸ್ತಿ ವ್ಯವಸ್ಥೆಯನ್ನು ಹಾಳು ಮಾಡಲು ಯತ್ನಿ ಸುತ್ತಿದ್ದಾರೆ ಎಂದು ಏಷ್ಯಾಡ್‌ ಮತ್ತು ಕಾಮನ್ವೆಲ್ತ್‌ ಗೇಮ್ಸ್‌ ಪದಕ ವಿಜೇತ ಮಹಿಳಾ ಕುಸ್ತಿಪಟುವೊಬ್ಬರು ಆರೋಪಿಸಿದ್ದಾರೆ. ವಿಶ್ವ ಕುಸ್ತಿ ಒಕ್ಕೂಟ ದೇಶದ ಕುಸ್ತಿಯನ್ನು ಕಾಪಾಡಲು ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

ಹೌದು.. ಭಾರತೀಯ ಕುಸ್ತಿಯಲ್ಲಿ ನಡೆಯುತ್ತಿರುವ ಬಿಕ್ಕಟ್ಟಿಗೆ ಹೊಸ ತಿರುವು ಸಿಕ್ಕಿದ್ದು, ಈ ಹಿಂದೆ ಬ್ರಿಜ್ ಭೂಷಣ್ ಸಿಂಗ್ ವಿರುದ್ಧ ಪ್ರತಿಭಟನೆ ನಡೆಸಿದ್ದ ಮೂರು ಹಿರಿಯ ರೆಸ್ಲರ್ ಗಳ ವಿರುದ್ಧವೇ ನೂರಾರು ಜೂನಿಯರ್ ಕುಸ್ತಿಪಟುಗಳು ತಿರುಗಿಬಿದ್ದಿದ್ದಾರೆ. ತಮ್ಮ ವೃತ್ತಿಜೀವನದ ಒಂದು ನಿರ್ಣಾಯಕ ವರ್ಷವನ್ನು ಪ್ರತಿಭಟನೆ ಹೆಸರಲ್ಲಿ ನಷ್ಟ ಮಾಡಿದ್ದಾರೆ ಎಂದು ಆರೋಪಿಸಿ ಇಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಉತ್ತರ ಪ್ರದೇಶ, ಹರಿಯಾಣ ಮತ್ತು ದೆಹಲಿಯ ವಿವಿಧ ಭಾಗಗಳಿಂದ ಬಸ್‌ಗಳಲ್ಲಿ ತುಂಬಿಕೊಂಡು ಜೂನಿಯರ್ ಕುಸ್ತಿಪಟುಗಳು ಆಗಮಿಸಿ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದಲ್ಲಿ ರೆಸ್ಲರ್ ಗಳು ಬಸ್ ನಲ್ಲಿ ಮೈದಾನಕ್ಕೆ ಬಂದಿದ್ದರೂ ಈ ಬಗ್ಗೆ ಪೊಲೀಸರ ಗಮನಕ್ಕೆ ಬಂದಿಲ್ಲ. ಪ್ರತಿಭಟನಾನಿರತರಲ್ಲಿ ಸುಮಾರು 300 ಮಂದಿ ಬಾಗ್‌ಪತ್‌ನ ಛಪ್ರೌಲಿಯಲ್ಲಿರುವ ಆರ್ಯ ಸಮಾಜ ಅಖಾರಾದಿಂದ ಬಂದಿದ್ದರೆ, ಇನ್ನೂ ಅನೇಕರು ನರೇಲಾದ ವೀರೇಂದ್ರ ಕುಸ್ತಿ ಅಕಾಡೆಮಿಯಿಂದ ಬಂದವರಾಗಿದ್ದಾರೆ ಎಂದು ತಿಳಿದುಬಂದಿದೆ.

ಇಷ್ಟು ಮಾತ್ರವಲ್ಲದೇ ಇನ್ನೂ ಅನೇಕರು ಇನ್ನೂ ಬಸ್‌ಗಳಲ್ಲಿದ್ದು, ಮೈದಾನಕ್ಕೆ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದೆ. ಹಿರಿಯ ರೆಸ್ಲರ್ ಗಳಾದ ಬಜರಂಗ್ ಪುನಿಯಾ, ಸಾಕ್ಷಿ ಮಲಿಕ್ ಮತ್ತು ವಿನೇಶ್ ಫೋಗಟ್ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಂತೆ ಅವರನ್ನು ನಿಯಂತ್ರಿಸಲು ಭದ್ರತಾ ಸಿಬ್ಬಂದಿ ಹರಸಾಹಸ ಪಟ್ಟರು. 'ಯುಡಬ್ಲ್ಯುಡಬ್ಲ್ಯು ಈ 3 ಕುಸ್ತಿಪಟುಗಳಿಂದ ನಮ್ಮ ಕುಸ್ತಿಯನ್ನು ಉಳಿಸಿ' ಎಂಬ ಬ್ಯಾನರ್‌ಗಳನ್ನು ಹಿಡಿದು ಪ್ರತಿಭಟನಾಕಾರರು ಪ್ರತಿಭಟನೆ ನಡೆಸಿದ್ದಾರೆ.

ವಿಪರ್ಯಾಸವೆಂದರೆ, ಸುಮಾರು ಒಂದು ವರ್ಷದ ಹಿಂದೆ ಇದೇ ಜಂತರ್ ಮಂತರ್ ಪ್ರತಿಭಟನಾ ಸ್ಥಳದಲ್ಲಿ, ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಮೇರೆಗೆ ಬ್ರಿಜ್ ಭೂಷಣ್ ಶರಣ್ ಸಿಂಗ್ ರನ್ನು ಬಂಧಿಸುವಂತೆ ಆಗ್ರಸಿ ರೆಸ್ಲರ್ ಗಳು ಪ್ರತಿಭಟನೆ ನಡೆಸಿದ್ದರು. ಈ ಪ್ರತಿಭಟನೆ ವ್ಯಾಪಕ ಸುದ್ದಿಗೆ ಗ್ರಾಸವಾಗಿ ರೈತ ಗುಂಪುಗಳು, ಸಮಾಜ ಕಾರ್ಯಕರ್ತರು, ರಾಜಕಾರಣಿಗಳು, ಮಹಿಳಾ ಗುಂಪುಗಳು ಮತ್ತು ಕುಸ್ತಿ ಬಂಧುಗಳ ಸದಸ್ಯರು ಸೇರಿದಂತೆ ಸಮಾಜದ ವಿವಿಧ ವರ್ಗಗಳ ಸಾವಿರಾರು ಜನರು ಪ್ರತಿಭಟನೆಗೆ ಬೆಂಬಲ ಘೋಷಣೆ ಮಾಡಿದ್ದರು. ಈ ಪ್ರತಿಭಟನೆಯಲ್ಲಿ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಮತ್ತು ಬಜರಂಗ್ ಪುನಿಯಾ ಅವರು ಪ್ರತಿಭಟನೆಯ ಮುಂಚೂಣಿಯಲ್ಲಿದ್ದರು.

ಇದೀಗ ಈ ಮೂರು ರೆಸ್ಲರ್ ಗಳು ತಮ್ಮದೇ ಕಿರಿಯ ಸಹೋದ್ಯೋಗಿಗಳಿಂದ ವಿರೋಧ ಎದುರಿಸುತ್ತಿದ್ದಾರೆ. ಪ್ರತಿಭಟನೆಯಿಂದ ತಮ್ಮ ವೃತ್ತಿಜೀವನವನ್ನು ಹಾಳುಮಾಡಿದ್ದಾರೆ ಎಂದು ಜೂನಿಯರ್ ರೆಸ್ಲರ್ ಗಳು ಆರೋಪಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com