
ಕೊಚ್ಚಿ: ಭಾರತದಲ್ಲಿರುವ ಫುಟ್ಬಾಲ್ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ದಂತಕಥೆ ಆಟಗಾರ ಲಿಯೋನೆಲ್ ಮೆಸ್ಸಿ ಒಳಗೊಂಡ ಅರ್ಜೆಂಟೀನಾ ತಂಡವನ್ನು ಅಕ್ಟೋಬರ್ನಲ್ಲಿ ಕೇರಳದಲ್ಲಿ ನಡೆಯಲಿರುವ ಸೌಹಾರ್ದ ಪಂದ್ಯದಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.
14 ವರ್ಷಗಳ ನಂತರ ವಿಶ್ವಕಪ್ ವಿಜೇತ ನಾಯಕ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಕೇರಳ ಕ್ರೀಡಾ ಸಚಿವ ವಿ ಅಬ್ದುರಹಿಮಾನ್ ಅವರು ಕಳೆದ ವರ್ಷ ನವೆಂಬರ್ ನಲ್ಲಿ ಅರ್ಜೆಂಟೀನಾ ತಂಡ ಕೊಚ್ಚಿಯಲ್ಲಿ ಎರಡು ಸೌಹಾರ್ದ ಪಂದ್ಯಗಳನ್ನು ಆಡುವ ಸುದ್ದಿಯನ್ನು ಘೋಷಿಸಿದ್ದರು.
ಭಾರತದಲ್ಲಿ ಪುಟ್ ಬಾಲ್ ಪ್ರೋತ್ಸಾಹಿಸಲು ಅರ್ಜೆಂಟೀನಾ ತಂಡದೊಂದಿಗೆ ಅಧಿಕೃತ ಪಾಲುದಾರರಾಗಿರುವ HSBC ಇಂಡಿಯಾ ಅಕ್ಟೋಬರ್ ನಲ್ಲಿ ಪಂದ್ಯ ನಡೆಯಲಿದೆ ಎಂದು ಘೋಷಿಸಿದೆ.
ಈ ಪಾಲುದಾರಿಕೆಯಡಿ ಲೆಜೆಂಡರಿ ಆಟಗಾರ ಲಿಯೋನೆಲ್ ಮೆಸ್ಸಿ ಸೇರಿದಂತೆ ಅರ್ಜೆಂಟೀನಾ ರಾಷ್ಟ್ರೀಯ ಫುಟ್ಬಾಲ್ ತಂಡ ಅಕ್ಟೋಬರ್ 2025 ರಲ್ಲಿ ಅಂತರರಾಷ್ಟ್ರೀಯ ಪ್ರದರ್ಶನ ಪಂದ್ಯಕ್ಕಾಗಿ ಭಾರತಕ್ಕೆ ಭೇಟಿ ನೀಡಲಿದೆ ಎಂದು HSBC ಇಂಡಿಯಾದ ಪ್ರಕಟಣೆ ತಿಳಿಸಿದೆ.
2026 ವಿಶ್ವಕಪ್ ಅರ್ಹತಾ ಫೈನಲ್ ಪಂದ್ಯಗಳ ಹಿನ್ನೆಲೆಯಲ್ಲಿ 2025 ರಲ್ಲಿ ಸ್ಪರ್ಧಾತ್ಮಕ ಸೀಸನ್ ಒಳಗೊಂಡಂತೆ ಭಾರತ ಮತ್ತು ಸಿಂಗಾಪುರಕ್ಕೆ ಹೊಸ ಒಂದು ವರ್ಷದ ಪಾಲುದಾರಿಕೆಗೆ ಸಹಿ ಹಾಕಿರುವುದಾಗಿ ಅರ್ಜೆಂಟೀನಾದ ಫುಟ್ಬಾಲ್ ಅಸೋಸಿಯೇಷನ್ (AFA) ಮತ್ತು HSBC ಇಂದು ಘೋಷಿಸಿವೆ.
ಸೆಪ್ಟೆಂಬರ್ 2011 ರಲ್ಲಿ ಕೋಲ್ಕತ್ತಾದಲ್ಲಿ ವೆನೆಜುವೆಲಾ ವಿರುದ್ಧ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯವನ್ನು ಆಡಲು ಮೆಸ್ಸಿ ಮೊದಲ ಬಾರಿಗೆ ಭಾರತಕ್ಕೆ ಭೇಟಿ ನೀಡಿದ್ದರು. ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಅರ್ಜೆಂಟೀನಾ ಆ ಪಂದ್ಯವನ್ನು 1-0 ಅಂತರದಲ್ಲಿ ಗೆದ್ದುಕೊಂಡಿತು.
Advertisement