ಕಾಲವಿ ಎಂಬ ಕಾವ್ಯನಾಮದಿಂದ 'c++ ಗೌರಮ್ಮ' ಸಂಕಲನದಲ್ಲಿ ಕವಿತೆಗಳನ್ನು ಬರೆದಿರುವ ವಿ. ಲಕ್ಷ್ಮೀಕಾಂತ್ ಅವರು ಓದಿದ್ದು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್. ಅವರಲ್ಲೊಬ್ಬ ಕವಿ ಕೀಬೋರ್ಡ್ ಕೀಗಳ ಸದ್ದಿನಂತೆ ಸದ್ದುಮಾಡುತ್ತಲೇ ಇದ್ದ. ಅವರೊಳಗಿನ ಕವಿ ಜಾಗೃತನಾದದ್ದು ಹಂಸಲೇಖ ಅವರ ಪ್ರಚೋದನೆಯಿಂದ. 'ಹಂಸಲೇಖರವರೇ ನನ್ನ ಕವನಗಳಿಗೆ ಮಾರ್ಗ/ ಏಕೆಂದರೆ ಅವರದು ಸಾಹಿತ್ಯದಲ್ಲಿ ಪ್ರತ್ಯೇಕ ವರ್ಗ/ ನನ್ನ ಕವನಗಳೆಲ್ಲಾ ಅವರಿಗೆ ಅರ್ಪಣೆ' ಎಂದು ಕಾಲವಿಯವರೇ ಹೇಳಿಕೊಂಡಿದ್ದಾರೆ. ಕೃತಿಯಲ್ಲಿ ಸ್ಮಾಲ್ ಸಾಂಗ್ಸ್ ಮತ್ತು ಲಾಂಗ್ ಸಾಂಗ್ಸ್ ಎಂಬ ಎರಡು ಭಾಗಗಳಿವೆ. 'ತಪಸ್ಸಿಗೆ ಕುಳಿತನು/ ವಿಶ್ವಾಮಿತ್ರ/ ಮೇನಕೆ ಬಂದು ನಲಿದಾಗ/ ಆದನು ಆಕೆಯ ಮಿತ್ರ!/'- ಇದು ಅವರ ಸ್ಮಾಲ್ ಸಾಂಗ್ಸ್ನ ಒಂದು ಉದಾಹರಣೆ. ಅವರ ಲಾಂಗ್ ಸಾಂಗ್ಸ್ನ 'C++ ಗೌರಮ್ಮ' ಕವಿತೆಯಲ್ಲಿ ಬೇರು ಗಟ್ಟಿಯಿಲ್ಲದೆ ಕಂಪ್ಯೂಟರ್ ವಿಜ್ಞಾನ ಕಲಿಯಲು ಬರುವವರನ್ನು ಅವರು ವಿಡಂಬನೆ ಮಾಡಿದ್ದಾರೆ. ಕಾಲವಿಯವರ ಆಲೋಚನೆಗಳು ಪದ್ಯದ ಹಿಡಿತದಿಂದ ತಪ್ಪಿಸಿಕೊಂಡು ಗದ್ಯವಾಗಲು ಹಟಮಾಡುತ್ತಿರುವಂತೆ ಕಂಡರೂ ಅವುಗಳ ಸಂದೇಶದಲ್ಲಿ ಕವಿತ್ವವಿದೆ.
ಕೃತಿ: c++ ಗೌರಮ್ಮ,
ಪ್ರಕಾರ: ಕವಿತೆ,
ಏಕೆ ಓದಬೇಕು?: ಓದಿನ ಖುಷಿಗೆ
ಪ್ರ: ಟೋಟಲ್ಕನ್ನಡ, ಬೆಂಗಳೂರು,
ಪುಟಗಳು 103, ಬೆಲೆ ರು. 80
- ಡಾ. ವಾಸುದೇವ ಶೆಟ್ಟಿ
Advertisement