ಯುವಜನ/ಮಕ್ಕಳು
ಶ್ರಾವಣ ಮಾಸ
ಶ್ರಾವಣ ಮಾಸವು
ಬಂದಿತು ಎಂದರೆ
ಬರುವುದು ಹಬ್ಬದ ಸಾಲು,
ಉಣುವುದು ಉಡುವುದು
ಸಂಭ್ರಮ ಪಡುವುದು
ಹರುಷವೆ ಎಲ್ಲರ ಪಾಲು
ಮೊದಲು ಬರುವದು
ನಾಗರ ಚವುತಿ
ಹಾವಿಗೆ ಹಾಲೆರೆಯುವರು,
ವಿಷ ಜಂತುವಿಗೂ
ಸಿಹಿ ನೀಡುತಲಿ
ಪ್ರಾಣಿ ಪ್ರೀತಿ ತೋರುವರು
ನಂತರ ಬರುವಳು
ವರ ಮಹಾಲಕುಮಿ
ಸಿರಿ ಸಂಪದದ ಅರಸಿ,
ರಕ್ಷಾ ಬಂಧನವು
ಅಣ್ಣ-ತಂಗಿಯರ
ಪೊರೆವುದು ಬಂಧನ ಬೆಸೆಸಿ.
ಇದೇ ಮಾಸದಲಿ
ಸ್ವಾತಂತ್ರ್ಯದ ದಿನ
ಭಾರತೀಯರ ಹಬ್ಬ,
ತ್ರಿವರ್ಣ ಧ್ವಜವು
ಬಾನಲಿ ಮೆರೆದಿದೆ
ಮೀರಿದೆ ಹರುಷವು ಅಬ್ಬ!
ಕೃಷ್ಣನ ಜನುಮ
ದಿನವು ಬರುವುದು
ಬಹುಳ ಅಷ್ಟಮಿ ದಿವಸ
ಗೀತೆಯ ಸಾರಿ
ಜೀವನ ಧನ್ಯತೆ
ಪಾಠವ ಹೇಳಿದ ಅರಸ.
ಹೀಗೆಯೆ ಶ್ರಾವಣ
ಮಾಸವು ಪೂರ್ತಿ
ಸಂಭ್ರಮ ಪಡುವ ಕಾಲ,
ಭಕುತಿ ಪ್ರೇಮಗಳ
ಭಾವೈಕ್ಯತೆಯನು
ಬೆಳೆಪುದೆ ಇದರ ಮೂಲ
-ಗುರುರಾಜ್ ಬೆಣಕಲ್
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ