ಮೋದಿ ಕನಸಿಗೆ ಶ್ರೀ ನಿರ್ಮಲಾನಂದ ಸಾಥ್

ನಿರ್ಮಲಾನಂದನಾಥ ಸ್ವಾಮೀಜಿ
ನಿರ್ಮಲಾನಂದನಾಥ ಸ್ವಾಮೀಜಿ

ನಾಗಮಂಗಲ: ಪ್ರಧಾನಿ ನರೇಂದ್ರ ಮೋದಿಯವರ ಆದರ್ಶ ಗ್ರಾಮ ಯೋಜನೆಗೆ ಸಂಸದರಿಂದ ನಿರೀಕ್ಷಿತ ಬೆಂಬಲ ಸಿಗದೇ ಇರಬಹುದು. ಆದರೆ ಪ್ರಧಾನಿಯವರ ಈ ಕನಸಿಗೆ ಸಾರ್ವಜನಿಕ ವಲಯದಲ್ಲಂತೂ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.

ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರಂತೂ ಒಂದು ಗ್ರಾಮ ಪಂಚಾಯಿತಿಯ ಎಲ್ಲ ಗ್ರಾಮಗಳನ್ನೂ ದತ್ತು ತೆಗೆದುಕೊಳ್ಳುವುದಾಗಿ ಘೋಷಿಸಿದ್ದಾರೆ. ಹಂತಹಂತವಾಗಿ ಮಂಡ್ಯ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಅಭಿವೃದ್ಧಿ ಪಡಿಸುವ ಸಂಕಲ್ಪ ಮಾಡಿದ್ದಾರೆ.

ನಾಗಮಂಗಲ ತಾಲೂಕಿನ ಬ್ರಹ್ಮದೇವರಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲ 16 ಗ್ರಾಮಗಳನ್ನು ಸ್ವಾಮೀಜಿ ದತ್ತು ಪಡೆದುಕೊಂಡಿದ್ದಾರೆ. ಈಗಾಗಲೇ ಮಠದ ಆಡಳಿತಾಧಿಕಾರಿಗಳು ಹಾಗೂ ನಾನು ಇಲಾಖೆಗಳ ಅಧಿಕಾರಿಗಳ ತಂಡ ಗ್ರಾಮಗಳ ಅಭಿವೃದ್ಧಿಗೆ ಪೂರಕ ನೀಲನಕ್ಷೆ ಸಿದ್ಧಪಡಿಸಿದೆ.

ಡಿ. 10ರಂದು ಬ್ರಹ್ಮದೇವರಹಳ್ಳಿಯಲ್ಲಿ ಹಳೇ ಬಾವಿಯೊಂದನ್ನು ಸ್ಪಚ್ಛಗೊಳಿಸುವ ಮೂಲಕ ಶ್ರೀ ನಿರ್ಮಲನಂದನಾಥ ಸ್ವಾಮೀಜಿ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಉದ್ದೇಶಿತ ಆದರ್ಶ ಗ್ರಾಮ ಕಾರ್ಯಕ್ರಮಗಳ ಉಸ್ತುವಾರಿ ನಿವೃತ್ತ ಐಎಎಸ್ ಅಧಿಕಾರಿ ಅಮರನಾರಾಯಣ ಅವರದು. ಇದಕ್ಕೆ ಪೂರಕವಾಗಿ ಶಾಸಕ ಎನ್ ಚಲುವರಾಯಸ್ವಾಮಿ, ಉಪವಿಭಾಗಾಧಿಕಾರಿ ಡಾ. ಎಚ್. ಎಲ್ ನಾಗರಾಜ್, ತಹಸೀಲ್ದಾರ್ ಶಿವಲಿಂಗ ಮೂರ್ತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆಯನ್ನು ಮಂಗಳವಾರ ನಡೆಸಲಾಗಿದೆ.

ಗ್ರಾಮೀಣರ ಸಮಸ್ಯೆಗಳನ್ನು ಅರಿತಿರುವ ಶ್ರೀಗಳ ಕೆಲಸ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ಶಾಸಕ ಚಲುವರಾಯಸ್ವಾಮಿ ತಿಳಿಸಿದರು. ತಾಪಂ ಅಧ್ಯಕ್ಷ ಮೂಡ್ಲೀಗೌಡ, ಕಾರ್ಯನಿರ್ವಹಣಾಧಿಕಾರಿ ಬೆಟ್ಟಸ್ವಾಮಿಗೌಡ, ಸಹಾಯಕ ಕೃಷಿ ನಿರ್ದೇಶಕಿ ಡಾ. ಕೆ ಮಾಲತಿ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಶಾಂತ, ಪಶುಸಂಗೋಪನೆಯ ಸಹಾಯ ನಿರ್ದೇಶಕ ಡಾ. ಎ ಪರಮೇಶ್ವರಪ್ಪ ಉಪಸ್ಥಿತರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com