ಬಹ್ರಾಯಿಚ್ (ಉ.ಪ್ರದೇಶ): ವಿಶ್ವ ವಿಖ್ಯಾತ ತಾಜ್ ಮಹಲನ್ನು ವಕ್ಫ್ ಆಸ್ತಿ ಎಂದು ಘೋಷಿಸಬೇಕು ಎಂದು ಹೇಳಿದ್ದ ಉತ್ತರ ಪ್ರದೇಶ ಸಚಿವ ಮಹಮ್ಮದ್ ಅಜಂ ಖಾನ್ ನಂತರ ಇದೀಗ ಉ.ಪ್ರದೇಶದ ಬಿಜೆಪಿ ಮುಖ್ಯಸ್ಥ ಲಕ್ಷ್ಮಿಕಾಂತ್ ಬಾಜ್ಪೈ , ತಾಜ್ಮಹಲ್ ಪುರಾತನ ದೇವಾಲಯವೊಂದರ ಭಾಗ ಎಂದು ಹೇಳುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದಾರೆ.
ಬಹ್ರಾಯಿಚ್ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಾಜ್ಪೈ, ಮೊಗಲ್ ಚಕ್ರವರ್ತಿ ಶಾಹ್ಜಹಾನ್ ರಾಜಾ ರಾಯ್ ಸಿಂಗ್ ಅವರಿಂದ ತೇಜೋ ಮಹಾಲಯ ದೇವಸ್ಥಾನದ ಭಾಗವೊಂದನ್ನು ಖರೀದಿ ಮಾಡಿದ್ದರು. ಇದಕ್ಕೆ ದೃಢೀಕರಿಸಲು ಸಂಬಂಧಪಟ್ಟ ದಾಖಲೆಗಳು ಈಗಲೂ ಇವೆ ಎಂದು ಅವರು ಹೇಳಿದ್ದಾರೆ.
ಅಜಂ ಖಾನ್ ವಕ್ಫ್ ಆಸ್ತಿಯನ್ನು ವಶ ಪಡಿಸಿಕೊಂಡಿದ್ದು, ಇದೀಗ ಅವರು ತಾಜ್ ಮಹಲ್ ಮೇಲೆಯೂ ಕಣ್ಣು ಹಾಕಿದ್ದಾರೆ. ಆದಾಗ್ಯೂ, ತಾಜ್ಮಹಲ್ನಲ್ಲಿ ಐದು ಬಾರಿ ನಮಾಜು ಮಾಡಬೇಕೆಂಬ ಅಜಂ ಖಾನ್ರ ಕನಸು ಯಾವತ್ತೂ ನನಸಾಗಲ್ಲ ಎಂದು ಭಾಜ್ಪೈ ಹೇಳಿದ್ದಾರೆ.
ತಾಜ್ ಮಹಲ್ನ್ನು ವಕ್ಫ್ ಆಸ್ತಿ ಎಂದು ಘೋಷಿಸಬೇಕೆಂದು ನವೆಂಬರ್ 13ರಂದು ಅಜಂ ಖಾನ್ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಬಗ್ಗೆ ಅಜಂ ಖಾನ್ರಲ್ಲಿ ಸ್ಪಷ್ಟನೆ ಕೇಳಿದಾಗ, ಇಂಥದೊಂದು ಪುಟ್ಟ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವ ಅಗತ್ಯವೇನಿತ್ತು? ಎಂದು ಪ್ರತಿಕ್ರಿಯಿಸಿದ್ದರು.
Advertisement