ತಿರುವನಂತಪುರ: ಕೇರಳದಲ್ಲಿ ಭಾರೀ ಕೋಲಾಹಲವೆಬ್ಬಿಸಿರುವ ಬಾರ್ ಲಂಚ ಪ್ರಕರಣದಲ್ಲಿ ಆರೋಪಿಯಾಗಿರುವ ರಾಜ್ಯ ವಿತ್ತ ಸಚಿವ ಕೆ.ಎಂ. ಮಾಣಿ ವಿರುದ್ಧ ಗುರುವಾರ ಕೇಸು ದಾಖಲಿಸಲಾಗಿದೆ. ಪ್ರಸ್ತುತ ಪ್ರಕರಣದಲ್ಲಿ ಮಾಣಿ ಪ್ರಥಮ ಆರೋಪಿಯಾಗಿದ್ದಾರೆ.
ಬಾರ್ ಮಾಲೀಕ ಬಿಜು ರಮೇಶ್ ಅವರ ಆರೋಪದ ಮೇರೆಗೆ ಸ್ಪೆಷಲ್ ವಿಜಿಲೆನ್ಸ್ ಸೆಲ್ ಮಾಣಿ ವಿರುದ್ಧ ಕೇಸು ದಾಖಲಿಸಿದೆ. ಮೊಬೈಲ್ ಟವರ್ ಕೇಂದ್ರವಾಗಿರಿಸಿ ನಡೆಸಿದ ತನಿಖೆಗಳ ವಿವರಗಳನ್ನೂ ವಿಜಿಲೆನ್ಸ್ ಇಲ್ಲಿ ಗಣನೆಗೆ ತೆಗೆದುಕೊಳ್ಳುವುದು. ಈ ತನಿಖೆಯ ನೇತೃತ್ವವನ್ನು ಪಿ. ಸುಖೇಶ್ ವಹಿಸಿದ್ದಾರೆ.
ಪ್ರಕರಣದ ಸಾಕ್ಷ್ಯ ಮತ್ತು ದಾಖಲೆಗಳನ್ನಾಧರಿಸಿ ಸಚಿವ ಮಾಣಿ ವಿರುದ್ಧ ಕೇಸು ದಾಖಲಿಸಿ ಎಂಬ ಆದೇಶ ವಿಜಿಲೆನ್ಸ್ಗೆ ಸಿಕ್ಕಿತ್ತು. ಲಂಚ ಆರೋಪದಲ್ಲಾದರೆ 42 ದಿನಗಳೊಳಗೆ ಎಫ್.ಐ.ಆರ್ ದಾಖಲಿಸಿ ಕೇಸು ದಾಖಲಿಸಬೇಕೆಂಬ ಸುಪ್ರೀಂ ಕೋರ್ಟ್ನ ನಿರ್ದೇಶನವನ್ನೂ ಇಲ್ಲಿ ಪರಿಗಣಿಸುವ ಸಾಧ್ಯತೆಯಿದೆ.
ಮಾಣಿ ವಿರುದ್ಧದ ಈ ಆರೋಪದಿಂದಾಗಿ ಕೇರಳದಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಸರ್ಕಾರ ಮುಜುಗರ ಅನುಭವಿಸುವಂತಾಗಿದೆ.
ಇತ್ತ ಪ್ರತಿಪಕ್ಷದ ಎಲ್ಡಿಎಫ್ ನಾಯಕರು ಮಾಣಿ ರಾಜಿನಾಮೆ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ, ಕೇಸು ದಾಖಲಿಸಿದಾಕ್ಷಣ ಮಾಣಿ ರಾಜಿನಾಮೆ ನೀಡುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ಹೇಳಿದೆ.
Advertisement