ಪಾಟ್ನಾ: ಮೇಲ್ಜಾತಿಗೆ ಸೇರಿದ ಜನರ ಗುಂಪೊಂದು, ತಮ್ಮ ಜೊತೆ ಮೀನುಗಳನ್ನು ಹಂಚಿಕೊಳ್ಳಲು ನಿರಾಕರಿಸಿದ ನಾಲ್ಕು ಜನರನ್ನು ಗುಂಡಿಟ್ಟು ಕೊಂದಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
ಪಾಟ್ನಾ ಜಿಲ್ಲೆಯ ಅಯ್ಯಾರ ಗ್ರಾಮದ ಬಳಿ ಮೀನು ಹಿಡಿಯುವುದರಲ್ಲಿ ನಿರತರಾಗಿದ್ದ ಕಡು ಬಡವ ಜನಾಂಗ ಬೈಂದ್ ಸಮುದಾಯಕ್ಕೆ ಸೇರಿದ ನಾಲ್ಕು ಜನರನ್ನು ಭಾನುವಾರ ತಡ ರಾತ್ರಿಯಲ್ಲಿ ಗುಂಡಿಕ್ಕಿ ಕೊಲ್ಲಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಸರ್ಕಾರಕ್ಕೆ ಸೇರಿದ ಕೊಳದಲ್ಲಿ ಮೀನು ಹಿಡಿಯುತ್ತಿದ ಈ ನಾಲ್ಕು ಮಂದಿ ಮೀನುಗಳನ್ನು ಹಂಚಿಕೊಳ್ಳಲು ನಿರಾಕರಿಸಿದಾಗ, ಮೇಲ್ಜಾತಿಯ ಆಯುಧದಾರಿ ಗುಂಪು ಗುಂಡು ಹಾರಿಸಿ ಅವರನ್ನು ಕೊಂದಿದ್ದಾರೆ" ಎಂದು ಪೋಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಕೊಲೆಗಳಿಂದ ಉದ್ರಿಕ್ತಗೊಂಡ ನೂರಾರು ಜನರು ಸೋಮವಾರ ರಸ್ತೆ ತಡೆ ನಡೆಸಿ, ಆಪಾದಿತರನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಕೊಲೆಯಾದ ನಾಲ್ಕೂ ಜನ ಸಿ ಪಿ ಐ (ಮಾರ್ಕ್ಸಿಸ್ಟ್-ಲೆನಿನಿಸ್ಟ್) ಬೆಂಬಲಿಗರು ಎಂದು ತಿಳಿದು ಬಂದಿದ್ದು, ಪಾಲಿಗಂಜ್ ನಲ್ಲಿ ದಲಿತರ ಬೆಂಬಲದೊಂದಿಗೆ ಭದ್ರ ನೆಲೆ ಇರುವ ಪಕ್ಷವಾಗಿದೆ.
ಗಾಯಗೊಂಡಿರುವ ಒಬ್ಬನ ಹೇಳಿಕೆಯ ಆಧಾರದ ಮೇರೆಗೆ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪಾಟ್ನಾದ ಹಿರಿಯ ಪೋಲೀಸ್ ಅಧಿಕಾರಿ ಜಿತೇಂದ್ರ ರಾಣಾ ತಿಳಿಸಿದ್ದಾರೆ.
ಅಪಾದಿತ ಕೊಲೆಗಾರರನ್ನು ಬಂದಿಸಲು ಪೋಲಿಸರು ಹಲವಾರು ಜಾಗಗಳಲ್ಲಿ ದಾಳಿ ನಡೆಸಿದ್ದು, ಜಿಲ್ಲಾಡಳಿತ ಘಟನೆ ನಡೆದ ಸ್ಥಳದಲ್ಲಿ ಬೀಡು ಬಿಟ್ಟಿದೆ ಎಂದು ರಾಣಾ ತಿಳಿಸಿದ್ದಾರೆ.
Advertisement