ಜಮ್ಮು : ಜಮ್ಮುನಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದ್ದ ಬಿಜೆಪಿ ನಾಯಕ ನವಜೋತ್ ಸಿಂಗ್ ಸಿಧು ಅವರ ಮೇಲೆ ಆಗಂತುಕರು ಹಲ್ಲೆ ನಡೆಸಲು ಯತ್ನಿಸಿದ ಘಟನೆ ಗುರುವಾರ ನಡೆದಿದೆ.
ಇಲ್ಲಿನ ಭೋರ್ ಕ್ಯಾಂಪ್ ಪ್ರದೇಶದಲ್ಲಿ ಗಾಂಧೀನಗರದ ಬಿಜೆಪಿ ಅಭ್ಯರ್ಥಿ ಕವಿಂದರ್ ಗುಪ್ತಾ ಅವರ ಪರ ಸಿಧು ಪ್ರಚಾರ ನಡೆಸುತ್ತಿದ್ದರು. ಆ ವೇಳೆ ಆಗಂತುಕರು ಸಿಧು ಬೆಂಗಾವಲು ಕಾರಿಗೆ ಇಟ್ಟಿಗೆ ಹಾಗು ಕಲ್ಲು ತೂರಾಟ ಮಾಡಿ ಗಲಾಟೆ ಮಾಡಿದ್ದಾರೆ. ಈ ವೇಳೆ ಸಿಧು ಅವರು ಪಾರಾಗಿದ್ದರೂ, ಅವರ ಕಾರು ಚಾಲಕನಿಗೆ ಗಾಯಗಳಾಗಿವೆ.
ಇತ್ತೀಚೆಗೆ ಸಿಧು ತಮ್ಮ ಧರ್ಮಗ್ರಂಥದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವುದೇ ಈ ಹಲ್ಲೆಗೆ ಕಾರಣ ಎಂದು ಹೇಳಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಸಿಧು ಬೆಂಗಾವಲು ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಹಲ್ಲೆಗೊಳಗಾಗಿರುವ ಚಾಲಕ ಪ್ರವೀಣ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸಿಧು ಅವರು ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ ಎಂದು ಬಿಜೆಪಿ ವಕ್ತಾರ ಅರುಣ್ ಗುಪ್ತಾಹೇಳಿದ್ದಾರೆ.
ಈ ಘಟನೆಗೆ ಕಾಂಗ್ರೆಸ್ ಕಾರಣ ಎಂದು ದೂರಿದ ಗುಪ್ತಾ, ನಾವು ಈ ಕೃತ್ಯವನ್ನು ಖಂಡಿಸುತ್ತೇವೆ. ಇದರ ಹಿಂದೆ ಕಾಂಗ್ರೆಸ್ ಕೈವಾಡವಿದೆ. ವಿಧಾನಸಭಾ ಕ್ಷೇತ್ರದಲ್ಲಿ ಮಾತ್ರ ಅಲ್ಲ ಇಡೀ ರಾಜ್ಯದಲ್ಲಿ ಬಿಜೆಪಿಗೆ ಜನಪ್ರಿಯತೆ ಸಿಗುತ್ತಿರುವುದನ್ನು ನೋಡಿ ಅಸೂಯೆಯಿಂದ ಕಾಂಗ್ರೆಸ್ ಈ ಕೃತ್ಯ ಮಾಡಿದೆ ಎಂದಿದ್ದಾರೆ.
ಘಟನೆಯ ಹಿನ್ನೆಲೆಯಲ್ಲಿ ಸಿಧು ಭೋರ್ ಕ್ಯಾಂಪ್ನಲ್ಲಿ ನಡೆಸುತ್ತಿದ್ದ ಪ್ರಚಾರ ಕಾರ್ಯಕ್ರಮವನ್ನು ರದ್ದುಗೊಳಿಸಿ, ಬೇರೆ ಪ್ರದೇಶದಲ್ಲಿ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ವಕ್ತಾರರು ಹೇಳಿದ್ದಾರೆ.
Advertisement