ನವದೆಹಲಿ: ಅಮಿರ್ ಖಾನ್ ನಟನೆಯ ಪಿಕೆ ಚಿತ್ರಕ್ಕೆ ತೆರಿಗೆ ವಿನಾಯಿತಿ ನೀಡಿ ಎಂದು ಆರ್ಯ ಸಮಾಜದ ನಾಯಕ ಸ್ವಾಮಿ ಅಗ್ನಿವೇಶ್ ಹೇಳಿದ್ದಾರೆ.
ಪಿಕೆ ಚಿತ್ರದಲ್ಲಿ ಉತ್ತಮ ಸಂದೇಶವಿದ್ದು, ಇದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತದೆ. ಧರ್ಮದ ಹೆಸರಿನಲ್ಲಿ ಮೂಢನಂಬಿಕೆ ಮತ್ತು ದೇವಮಾನವರನ್ನು ಆರಾಧಿಸುವ ಜನರಿಗೆ ಪಿಕೆ ಕಣ್ಣುತೆರೆಸುವಂತೆ ಮಾಡಿದೆ ಎಂದು ಬಂಧುವಾ ಮುಕ್ತಿ ಮೋರ್ಚಾ ಸಂಘದ ಪ್ರಕಟಣೆಯಲ್ಲಿ ಅಗ್ನಿವೇಶ್ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ.
ಸ್ವಾಮಿ ರಾಮ್ದೇವ್ನಂಥಾ ಧಾರ್ಮಿಕ ನಾಯಕ ಹಾಗೂ ಇತರ ಧಾರ್ಮಿಕ ಸಂಘಟನೆಗಳಾದ ವಿಶ್ವ ಹಿಂದೂ ಪರಿಷತ್ ಅಥವಾ ಜಮಾತ್ ಇ ಇಸ್ಲಾಮಿ ಹಿಂದ್ ಸಂಘಟನೆಗಳ ಬಣ್ಣದ ಮಾತುಗಳಿಗೆ ಮರುಳಾಗಬೇಡಿ ಎಂದು ಹೇಳಿದ ಅಗ್ನಿವೇಶ್, ಪಿಕೆ ಭಕ್ತಿಯ ಹೆಸರನ್ನು ಜನರನ್ನು ಶೋಷಣೆಗೊಳಪಡಿಸುವ ಪದ್ಧತಿಯ ಬಗ್ಗೆ ದನಿಯೆತ್ತಿದೆ ಎಂದಿದ್ದಾರೆ.
ಧಾರ್ಮಿಕ ನೇತಾರರು ಮತ್ತು ಸಂಘಟನೆಗಳು ಭಕ್ತರನ್ನು ಭಯಭೀತರನ್ನಾಗಿಸುವುದು ಸಹಜ. ಇಂಥಾ ಮೂಢನಂಬಿಕೆಗಳನ್ನು ಪಿಕೆ ಪ್ರಶ್ನಿಸಿದೆ.
ಆದಾಗ್ಯೂ, ಧಾರ್ಮಿಕ ಮುಖಂಡರು ಪ್ರಸ್ತುತ ಸಿನಿಮಾದ ಸ್ಕ್ರೀನಿಂಗ್ ಸರ್ಟಿಫಿಕೇಟ್ನ್ನು ಪುನವಿಮರ್ಶೆಗೊಳಪಡಿಸಬೇಕೆಂದು ಸಲ್ಲಿಸಿದ ಮನವಿಯನ್ನು ತಿರಸ್ಕರಿಸಿದ್ದಕ್ಕಾಗಿ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ಸ್ ಮುಖ್ಯಸ್ಥೆ ಲೀಲಾ ಸಾಮ್ಸನ್ ಅವರನ್ನು ಅಗ್ನಿವೇಶ್ ಅಭಿನಂದಿಸಿದ್ದಾರೆ.
Advertisement