ನವದೆಹಲಿ: ವಿಧಾನಸಭಾ ಚುನಾವಣೆಗೆ ಸಜ್ಜಾಗಿರುವ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್, ತಮ್ಮ ಪಕ್ಷ ಪ್ರಾಮಾಣಿಕತೆಯನ್ನು ಮೈಗೂಡಿಸಿದ್ದು, ಹೇಳಿದ ಮಾತಿಗೆ ತಪ್ಪಲ್ಲ ಎಂದಿದ್ದಾರೆ. ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಕೇಜ್ರಿವಾಲ್ ದೆಹಲಿಯ ಜನತೆ ತಮ್ಮ ಸಮಸ್ಯೆಗಳನ್ನು ನಮ್ಮಲ್ಲಿ ಹಂಚಿಕೊಳ್ಳಿ ಎಂದು ಜನತೆಗೆ ಕರೆ ನೀಡಿದ್ದಾರೆ.
ಶನಿವಾರ ಜಂತರ್ ಮಂತರ್ನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿದ ಮಾತನಾಡಿದ ಕೇಜ್ರಿವಾಲ್, ನೀವು ಯಾರಲ್ಲಾದರೂ ಆಪ್ ಬಗ್ಗೆ ಕೇಳಿದರೆ, ಅವರು ಹೇಳುವ ಉತ್ತರ ಎಂದರೆ, ಮೊದಲನೆಯದ್ದು ಪ್ರಾಮಾಣಿಕತೆ, ಎರಡನೆಯದ್ದು ನಾವು ಹೇಳಿದ್ದನ್ನು ಮಾಡಿದ್ದೇವೆ ಮತ್ತು ಮೂರನೆಯದ್ದು ಆಪ್ ತುಂಬಾ ಧೈರ್ಯವಂತರ ಪಕ್ಷ ಎಂದು ಹೇಳುತ್ತಾರೆ.
ನಾವು ಕೇವಲ 49 ದಿನ ಅಧಿಕಾರದಲ್ಲಿದ್ದೆವು ಆದರೆ ನಾವು ಭರವಸೆ ನೀಡಿದ್ದ ಕೆಲಸವನ್ನೆಲ್ಲ ಮಾಡಿದ್ದೆವು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಒಂದು ವೇಳೆ ನಾವು ಈ ಬಾರಿಯ ಚುನಾವಣೆಯಲ್ಲಿ ಗೆದ್ದರೆ, ಆಪ್ ಪಕ್ಷ 8 ಲಕ್ಷ ಜನರಿಗೆ ಕೆಲಸ ನೀಡುವುದು ಮಾತ್ರವಲ್ಲದೆ ಮುಂದಿನ 5 ವರ್ಷಗಳಲ್ಲಿ 10 ಲಕ್ಷ ಯುವಕರಿಗೆ ತರಬೇತಿಯನ್ನೂ ನೀಡುತ್ತೇವೆ. ದೆಹಲಿಯಲ್ಲಿ ನಾವು ಎಲ್ಲೆಡೆ ವೈಫೈ ಸಂಪರ್ಕ ವ್ಯವಸ್ಥೆಯನ್ನೂ ಕಲ್ಪಿಸುತ್ತೇವೆ.
ದೆಹಲಿಯ ಯುವಕರು ಜಾಣರಿದ್ದಾರೆ, ಆದರೂ ಅವರಿಗೆ ಕಾಲೇಜಿನಲ್ಲಿ ಸೀಟು ಸಿಗುವುದಿಲ್ಲ, ನಾವು ಈ ನಗರದಲ್ಲಿ 20 ಹೊಸ ಕಾಲೇಜುಗಳನ್ನು ಸ್ಥಾಪಿಸಿ, 12ನೇ ಕ್ಲಾಸಿನ ನಂತರ ಕಾಲೇಜು ಮುಂದುವರಿಸಲು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತೇವೆ. ಈ ಬಗ್ಗೆ ನಾವು ಲೆಕ್ಕಾಚಾರ ಮಾಡಿದ್ದು, ಇದು ನಮ್ಮಿಂದ ಸಾಧ್ಯ ಎಂದು ಕೇಜ್ರಿವಾಲ್ ಹೇಳಿದ್ದಾರೆ.
Advertisement