
ಬೆಂಗಳೂರು: ಡಿಜಿಟಲ್ ಭಾರತಕ್ಕೆ ಮರುಜೀವ ಹಾಗೂ ನಾವು ಮೊಬೈಲ್ ಆಡಳಿತಕ್ಕೆ ಒತ್ತು ನೀಡುವ ಮೂಲಕ ಆಡಳಿತದಲ್ಲಿ ಪಾರದರ್ಶಕ ಸೇವೆ ನೀಡುತ್ತೇವೆ ಎಂದು ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಬಿಜೆಪಿ ಬಹಿರಂಗ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕನ್ನಡಿಗರನ್ನು ಉದ್ದೇಶಿಸಿ ಮಾತನಾಡುತ್ತಿರುವುದು ನನಗೆ ಸಂತಸ ತಂದಿದೆ. ಇದೇ ವೇಳೆ ಮೇಕ್ ಇನ್ ಇಂಡಿಯಾ, ಸಬ್ ಕೆ ಸಾಥ್, ಸಬ್ ಕೆ ವಿಕಾಸ್ ಘೋಷಣೆಗಳ ಮೂಲಕ ದೇಶ ಅಭಿವೃದ್ಧಿ ಪತದಲ್ಲಿ ಕೊಂಡೊಯ್ಯಲಾಗುತ್ತಿದೆ ಎಂದರು.
‘ರಾಷ್ಟ್ರದ ಒಟ್ಟಾರೆ ಅಭಿವೃದ್ಧಿಯಲ್ಲಿ ರಾಜ್ಯಗಳನ್ನು ಜತೆ ಜತೆಯಲ್ಲಿಯೇ ಕೊಂಡೊಯ್ಯಲಾಗುವುದು. ರಾಜ್ಯಗಳಿಗಾಗಿ ಕೇಂದ್ರದ ಖಜಾನೆಯನ್ನು ಖಾಲಿ ಮಾಡಲೂ ಸಿದ್ಧ’ ಎಂದು ನರೇಂದ್ರ ಮೋದಿ ಹೇಳಿದ್ದಾರೆ.
ಈ ವೇಳೆ ಕಾಂಗ್ರೆಸ್ ವಿರುದ್ಧ ಟೀಕಾಪ್ರಹಾರ ಮುಂದುವರೆಸಿದರು. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಹಗರಣಗಳು ದಿನ ಬೆಳಗೆದ್ದರೆ ಪತ್ರಿಕೆ ಟಿವಿಗಳಲ್ಲಿ ಬಿತ್ತರಗೊಳ್ಳುತ್ತಿದ್ದವು. ದೇಶದ ಆಸ್ತಿಯನ್ನು ಕೊಳ್ಳೆ ಹೊಡೆದು ತಮ್ಮ ಖಜಾನೆಯನ್ನು ತುಂಬಿಸಿಕೊಳ್ಳುತ್ತಿದ್ದರು ಎಂದು ಲೇವಡಿ ಮಾಡಿದರು. ಈ ಹಿಂದಿನ ಕಾಂಗ್ರೆಸ್ ಸರ್ಕಾರ ತನ್ನ ಆಡಳಿತಾವಧಿಯಲ್ಲಿ ದೇಶದ ಅಭಿವೃದ್ಧಿ ಬದಲಾಗಿ ಭ್ರಷ್ಟಾಚಾರದಲ್ಲಿ ಮುಳುಗಿತ್ತು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ನ ಭ್ರಷ್ಟಾಚಾರದಿಂದ ಬೇಸತ್ತ ಯುವ ಜನತೆ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕೆಂದು ನಿರೀಕ್ಷಿಸಿದ್ದರು. ಅಂತೆ ನಾವು ಸಹ ಪ್ರಮುಖ ಹಗರಣಗಳ ವಿರುದ್ಧ ಹೋರಾಟ ಮಾಡಿದ್ದೇವು ಅದರ ಪ್ರತಿಫಲವಾಗಿ ಇಂದು ಕಲ್ಲಿದ್ದಲು ಹರಾಜಿನಲ್ಲಿ ದೇಶದ ಬೊಕ್ಕಸಕ್ಕೆ 2 ಲಕ್ಷ ಕೋಟಿ ರಾಜಧನ ಬಂದಿದೆ. ಕಲ್ಲಿದ್ದಲು ಮತ್ತು 2ಜಿ 3ಜಿ ಸ್ಪೆಕ್ಟ್ರಂ ಅನ್ನು ಪಾರದರ್ಶಕವಾಗಿ ಮಾಡಿದ್ದೇವೆ.
ಇಂದು ವಾತಾವರಣ ಬದಲಾಗುತ್ತಿದೆ ದೇಶ ಅಭಿವೃದ್ಧಿಯತ್ತ ಸಾಗಿದೆ. ದೇಶದ ಯುವಕರು ದೇಶದ ಭವಿಷ್ಯದ ಬಗ್ಗೆ ಚಿಂತಿಸುವ ಅಗತ್ಯ ಇಲ್ಲ. ಮೇಕ್ ಇನ್ ಇಂಡಿಯಾ ಕಾರ್ಯಕ್ರಮದ ಮೂಲಕ ಯುವಕರಿಗೆ ಉದ್ಯೋಗ ಸಿಗಲಿದೆ ಎಂಬ ಭರವಸೆ ನೀಡಿದರು.
ಭೂಸ್ವಾಧೀನ ಮಸೂದೆಯಲ್ಲಿ ಅಗತ್ಯ ಸುಧಾರಣೆಗೆ ಸರ್ಕಾರ ಬದ್ಧವಾಗಿದೆ. ಈ ಮೂಲಕ ಸರ್ಕಾರ ರೈತರ ಹಿತ ಕಾಯಲಿದೆ. ರೈತರ ಜಮೀನು ರಕ್ಷಣೆಗೆ ಮೊದಲ ಆಧ್ಯತೆ ನೀಡಲಾಗುವುದು. ಸಣ್ಣ ವ್ಯಾಪಾರಿಗಳೂ ದೇಶದ ಆರ್ಥಿಕತೆಗೆ ಅಪಾರ ಕೊಡುಗೆ ನೀಡಿದ್ದಾರೆ. ಒಟ್ಟಾರೆ ಎಲ್ಲಾ ಕ್ಷೇತ್ರದ ಬೆಳವಣಿಗೆ ಮೂಲಕ ಭಾರತ ಭವಿಷ್ಯ ಬದಲಾಯಿಸಿಕೊಳ್ಳುವ ಹಂತದಲ್ಲಿದೆ ಎಂದು ಆಶಯ ವ್ಯಕ್ತಪಡಿಸಿದರು.
Advertisement