ಬೆಂಗಳೂರು: ದಿವಂಗತ ಐ ಎ ಎಸ್ ಅಧಿಕಾರಿ ಡಿ ಕೆ ರವಿ ಮತ್ತು ಮತ್ತೊಬ್ಬ ಐ ಎ ಎಸ್ ಮಹಿಳಾ ಅಧಿಕಾರಿಯ ನಡುವಿನ ಸಂದೇಶಗಳು ಮಾಧ್ಯಮಕ್ಕೆ ಬಹಿರಂಗವಾದದ್ದು ಹೇಗೆ ಎಂದು ಕರ್ನಾಟಕ ಹೈಕೋರ್ಟ್ ನ ನ್ಯಾಯಧೀಶ ಎಸ್ ಅಬ್ದುಲ್ ನಜೀರ್ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.
ರವಿ ಅವರ ಅಸಹಜ ಸಾವಿನ ಕುರಿತು ಸಿಐಡಿ ತನಿಖೆಯ ಮದ್ಯಂತರ ವರದಿಯ ಮೇಲಿರುವ ನಿಷೇಧವನ್ನು ತೆರವುಗೊಳಿಸುವಂತೆ ರಾಜ್ಯಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿದ್ದಾಗ ನ್ಯಾಯಾಧೀಶರು ಈ ಪ್ರಶ್ನೆ ಕೇಳಿದ್ದಾರೆ. ಮಹಿಳಾ ಐ ಎ ಎಸ್ ಅಧಿಕಾರಿಯ ಪತಿಯ ಕೋರಿಕೆಯಂತೆ ಸಿಐಡಿ ವರದಿಯನ್ನು ಬಹಿರಂಗಗೊಳಿಸದಂತೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.
"ಮೊಬೈಲ್ ಫೋನ್ ಮತ್ತು ಇತರ ದಾಖಲೆಗಳು ನಿಮ್ಮ ಸುಪರ್ಧಿಯಲ್ಲಿವೆ. ಮಧ್ಯಂತರ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಇಡಲಾಗಿದೆ. ನಾನು ಆಕಸ್ಮಿಕವಾಗಿ ಟಿವಿ ನೋಡುವಾಗ ಎಸ್ ಎಂ ಎಸ್ ಮತ್ತು ವಾಟ್ಸ್ ಆಪ್ ಸಂದೇಶಗಳನ್ನು ಪ್ರಾದೇಶಿಕ ಸುದ್ದಿ ವಾಹಿನಿಗಳು ಅಕ್ಷರಶಃ ತೋರಿಸುತ್ತಿದ್ದರು. ನಿಮ್ಮ ಸುಪರ್ಧಿಯಲ್ಲಿದ್ದ ಸಂದೇಶಗಳು ಮಾಧ್ಯಮಗಳಿಗೆ ಸೋರಿಕೆಯಾಗಿದ್ದು ಹೇಗೆ" ಎಂದು ನ್ಯಾಯಧೀಶ ಸರ್ಕಾರಿ ವಕೀಲ ಎಸ್ ಪೊನ್ನಣ್ಣ ಅವರನ್ನು ಕೇಳಿದ್ದಾರೆ.
ಈ ಸಂದೇಶಗಳ ಸೋರಿಕೆಗೆ ಸರ್ಕಾರವಾಗಲೀ ಸಿಐಡಿ ಆಗಲೀ ಕಾರಣವಲ್ಲ. ಯಾರೋ ಮೂರನೆ ವ್ಯಕ್ತಿ ಈ ಸಂದೇಶಗಳನ್ನು ಮಾಧ್ಯಮಕ್ಕೆ ನೀಡಿದ್ದಾರೆ. ಸರ್ಕಾರದ ವಿರುದ್ಧ ಅಪಪ್ರಚಾರ ನಡೆಯುತ್ತಿರುವುದರಿಂದ ಈ ಮಧ್ಯಂತರ ತನಿಖಾ ವರದಿಯನ್ನು ಬಹಿರಂಗಗೊಳಿಸಬೇಕಿದೆ ಎಂದು ಪೊನ್ನಣ್ಣ ವಾದಿಸಿದ್ದಾರೆ.
Advertisement