ಆಂಧ್ರ ಎನ್ಕೌಂಟರ್: 6 ಜನರ ಶವ ಸಂಸ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ತಡೆ
ಚೆನ್ನೈ: ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಮೃತಪಟ್ಟ 20 ಸ್ಮಗ್ಲರ್ಗಳ ಪೈಕಿ ಆರು ಜನರ ಶವ ಸಂಸ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಗುರುವಾರ ತಡೆಯಾಜ್ಞೆ ವಿಧಿಸಿದೆ.
ಆಂಧ್ರ ಪೊಲೀಸರು ನಕಲಿ ಎನ್ಕೌಂಟರ್ ನಡೆಸಿದ್ದಾರೆ ಎಂದು ಆರೋಪಿಸಿ ಎನ್ಕೌಂಟರ್ನಲ್ಲಿ ಮೃತಪಟ್ಟಿ ವ್ಯಕ್ತಿಯೊಬ್ಬರ ಪತ್ನಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಸತ್ಯನಾರಾಯಣನ್ ಅವರು, ನಾಳೆ ಕೋರ್ಟ್ ವಿಚಾರಣೆ ಮುಗಿಯುವವರೆಗೂ ಶವ ಸಂಸ್ಕಾರ ನಡೆಸದಂತೆ ಆದೇಶಿಸಿದ್ದಾರೆ.
ಕಳೆದ ಮಂಗಳವಾರ ನಡೆದ ಭಾರಿ ಗುಂಡಿನ ಕಾಳಗದಲ್ಲಿ ಮೃತಪಟ್ಟ ತನ್ನ ಪತಿಯ ಶವದ ಮರು ಮರಣೋತ್ತರ ಪರೀಕ್ಷೆ ಕೋರಿ ಮಹಿಳೆ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ನಾಳೆ ವಿಚಾರಣೆ ನಡೆಯಲಿದೆ.
ಚಿತ್ತೂರು ಜಿಲ್ಲೆ, ಚಂದ್ರಗಿರಿ ಮಂಡಲ್ ಶ್ರೀನಿವಾಸ ಮಂಗಾಪುರದ ಸಮೀಪ ಆಂಧ್ರದ ವಿಷೇಷ ಕಾರ್ಯಪಡೆ ಪೊಲೀಸರು ಮತ್ತು ಅರಣ್ಯ ಇಲಾಖೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ತಮಿಳುನಾಡಿನ 20 ರಕ್ತಚಂದನ ಕಳ್ಳರು ಹತರಾಗಿದ್ದರು. ಆದರೆ ಆಂಧ್ರದ ಈ ಕಾರ್ಯಾಚರಣೆಯನ್ನು ತೀವ್ರವಾಗಿ ವಿರೋಧಿಸಿರುವ ತಮಿಳುನಾಡು ಸರ್ಕಾರ, ಮೃತಪಟ್ಟವರು ಕಳ್ಳರಲ್ಲ, ನಮ್ಮ ರಾಜ್ಯದ ಕೂಲಿ ಕಾರ್ಮಿಕರು ಎಂದು ಹೇಳಿದೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ