ನವದೆಹಲಿ: ರಫೇಲ್ ಯುದ್ಧವಿಮಾನಗಳಲ್ಲಿ ದೋಷಗಳಿವೆ ಎಂದು ದೂರಿರುವ ಬಿಜೆಪಿ ಮುಖಂಡ ಸುಬ್ರಮಣ್ಯಸ್ವಾಮಿ, ಕೇಂದ್ರ ಸರ್ಕಾರ ಫ್ರಾನ್ಸಿನ ರಫೇಲ್ ಜೆಟ್ ಒಪ್ಪಂದದ ಜೊತೆ ಮುಂದುವರೆದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಶುಕ್ರವಾರ ಎಚ್ಚರಿಸಿದ್ದಾರೆ.
ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಮಿತಿಯ ಸದಸ್ಯ ಸ್ವಾಮಿ, ಯುಪಿಎ ಸರ್ಕಾರ ವ್ಯವಹರಿಸಿದ್ದ ರಫೇಲ್ ಒಪ್ಪಂದದ ಜೊತೆ ಮುಂದುವರೆಯದಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮನವಿ ಮಾಡಿದ್ದಾರೆ, ಈಜಿಪ್ಟ್ ಮತ್ತು ಲಿಬಿಯಾದಲ್ಲಿ ಈ ಯುದ್ಧ ವಿಮಾನದ ಪ್ರದರ್ಶನ ಇನ್ನುಳಿದ ಎಲ್ಲ ವಿಮಾನಗಳಿಗಿಂತಲೂ ಕಳಪೆಯಾಗಿದೆ ಎಂದು ಕೂಡ ಅವರು ತಿಳಿಸಿದ್ದಾರೆ.
ಸದ್ಯ ಫ್ರಾನ್ಸ್ ಪ್ರವಾಸದಲ್ಲಿರುವ ಮೋದಿ, ಫ್ರಾನ್ಸ್ ನಾಯಕರ ಜೊತೆ ಸಮಗ್ರ ಮಾತುಕತೆ ನಡೆಸುತ್ತಿದು ರಫೇಲ್ ಒಪ್ಪಂದವೂ ಮಾತುಕತೆಯಲ್ಲಿ ಮೂಡಿಬರಲಿದೆ ಎಂದು ತಿಳಿಯಲಾಗಿದೆ.
"ರಫೇಲ್ ವೈಮಾನಿಕ ಒಪ್ಪಂದದಲ್ಲಿ ಎರಡು ಪ್ರಮುಖ ತೋಂದರೆಗಳಿದ್ದು ಜಿಜೆಪಿ ಸರ್ಕಾರಕ್ಕೆ ಕಿರಿಕಿರಿಯುಂಟುಮಾಡಲಿವೆ. ಮೊದಲನೆಯದು ರಫೇಲ್ ಯುದ್ಧ ವಿಮಾನಕ್ಕೆ ಇಂಧನ ದಕ್ಷತೆ ಇಲ್ಲ ಹಾಗೂ ಅಗತ್ಯ ಕಾರ್ಯಾಚರಣೆಯ ಕೊರತೆಯೂ ಇದ್ದು ಯಾವುದೇ ದೇಶ ಈ ವಿಮಾನವನ್ನು ಕೊಳ್ಳಲು ಒಪ್ಪುತ್ತಿಲ್ಲ" ಎಂದು ಸ್ವಾಮಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಬೇರೆ ಇನ್ಯಾವುದೋ ಒತ್ತಾಯಕ್ಕೆ ಮಣಿದು ಪ್ರಧಾನಿ ಅವರು ಈ ಒಪ್ಪಂದದ ಜೊತೆ ಮುಂದುವರೆದರೆ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸದೆ ನನಗೆ ಅನ್ಯಮಾರ್ಗವಿಲ್ಲ" ಎಂದು ಅವರು ತಿಳಿಸಿದ್ದಾರೆ.
ಅಲ್ಲದೆ ದಸ್ಸಾಲ್ಟ್ ಜೊತೆ ಒಪ್ಪಂದ ಮಾಡಿಕೊಂಡ ಮೇಲೆ ಕೂಡ ಎಷ್ಟೋ ದೇಶಗಳು ಒಪ್ಪಂದವನ್ನು ರದ್ದು ಮಾಡಿವೆ ಎಂದು ಅವರು ತಿಳಿಸಿದ್ದಾರೆ.
೨೦೧೨ ರಲ್ಲಿ ನಡೆದ ಗುತ್ತಿಗೆ ಹರಾಜಿನಲ್ಲಿ ಅತಿ ಕಡಿಮೆ ಬಿಡ್ ಸಲ್ಲಿಸಿದ್ದಕ್ಕೆ ರಫೇಲ್ ಅನ್ನು ಭಾರತ ಸರ್ಕಾರ ಆಯ್ಕೆ ಮಾಡಿತ್ತು. ಮೊದಲು ಈ ಒಪ್ಪಂದ ೧೦ ಬಿಲಿಯನ್ ಡಾಲರ್ ಎನ್ನಲಾಗಿದ್ದರೂ ಅದು ೨೦ ಬಿಲಿಯನ್ ಡಾಲರ್ಗಳಿಗೆ ಹೆಚ್ಚಿತ್ತು.
Advertisement