ನವದೆಹಲಿ: ಕೊಲೆ, ಅತ್ಯಾಚಾರದಂಥ ಗಂಭೀರ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ 16ರಿಂದ 18 ವರ್ಷದೊಳಗಿನವರು ಬಾಲಾಪರಾಧಿಗಳೆಂದು ಹೇಳಿಕೊಂಡು ಕಠಿಣ ಶಿಕ್ಷೆಯಿಂದ
ತಪ್ಪಿಸಿಕೊಳ್ಳುವಂತಿಲ್ಲ.
ಗಂಭೀರ ಅಪರಾಧಗಳಲ್ಲಿ ಭಾಗಿಯಾಗುವ 16ರಿಂದ 18 ವರ್ಷದೊಳಗಿನವರನ್ನು ಬಾಲಾಪರಾಧಿಗಳನ್ನಾಗಿ ಪರಿಗಣಿಸದಿರಲು ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಬಾಲನ್ಯಾಯ ಕಾಯ್ದೆ ತಿದ್ದುಪಡಿಗೆ ಮಾಡಿದ್ದ ಶಿಫಾರಸುಗಳಿಗೆ ಕೇಂದ್ರ ಸಚಿವ ಸಂಪುಟ ಸಭೆ ಬುಧವಾರ ಒಪ್ಪಿಗೆ ನೀಡಿದೆ.
ಬಾಲಾಪರಾಧಿಗಳು ಮಾಡಿರುವ ಅಪರಾಧ ಗಂಭೀರವೇ ಎನ್ನುವ ತೀರ್ಮಾನವನ್ನು ಬಾಲ ನ್ಯಾಯ ಮಂಡಳಿಯೇ ತೆಗೆದುಕೊಳ್ಳಲು ಶಿಫಾರಸು ಅವಕಾಶ ಮಾಡಿಕೊಟ್ಟಿದೆ. ಡಿ.16 ದೆಹಲಿ
ಗ್ಯಾಂಗ್ರೇಪ್ ಪ್ರಕರಣದ ಬಳಿಕ ಗಂಭೀರ ಅಪರಾಧಗಳಲ್ಲಿ ಭಾಗಿಯಾಗುವ ಬಾಲಾ00ಪರಾಧಿಗಳಿಗೂ ಕಠಿಣ ಶಿಕ್ಷೆಯಾಗಬೇಕು. 18 ವರ್ಷಕ್ಕಿಂತ ಕೆಳಗಿನವರು ಅನ್ನುವ ಕಾರಣಕ್ಕೆ ಶಿಕ್ಷೆಯಿಂದ ತಪ್ಪಿಸಿಕೊಳ್ಳುವಂತಾಗಬಾರದು ಎನ್ನುವ ಆಗ್ರಹ ಕೇಳಿಬಂದಿತ್ತು. ಈ ಸಂಬಂಧ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯವು ರಾಷ್ಟ್ರಾದ್ಯಂತ ಕಾನೂನು ತಿದ್ದುಪಡಿಗೆ ಸಂಬಂಧಿಸಿ ಅಭಿಪ್ರಾಯ ಕೇಳಿತ್ತು.
ಈ ಅಭಿಪ್ರಾಯದ ಆಧಾರದ ಮೇಲೆ ಸಚಿವಾಲಯವು ಬಾಲನ್ಯಾಯ ಕಾಯ್ದೆ- 2000ಕ್ಕೆ ತಿದ್ದುಪಡಿ ತರುವ ಶಿಫಾರಸು ಮಾಡಿತ್ತು. ಡಿ.16ರ ಗ್ಯಾಂಗ್ ರೇಪ್ ಪ್ರಕರಣದಲ್ಲಿ ದೋಷಿಗಳ ಪೈಕಿ ಒಬ್ಬನಿಗೆ 18 ವರ್ಷ ತುಂಬಲು 17 ದಿನವಷ್ಟೇ ಬಾಕಿ ಇತ್ತು. ಹೀಗಾಗಿ ಆತನನ್ನು ಬಾಲಾಪರಾಧಿ ಎಂದು ಪರಿಗಣಿಸಿ ಬಾಲನ್ಯಾಯ ಕಾಯ್ದೆಯಂತೆ ಆತನಿಗೆ ಗರಿಷ್ಠ 3 ವರ್ಷ ಜೈಲು ಶಿಕ್ಷೆಯನ್ನಷ್ಟೇ ನೀಡಲಾಗಿತ್ತು. ಇದು ತೀವ್ರ ಆಕ್ರೋಶಕ್ಕೆ ಗುರಿಯಾಗಿತ್ತು.
Advertisement