ಕರ್ನೂಲ್: ಟಾಲಿವುಡ್ ನಟಿ ನೀತು ಅಗರ್ವಾಲ್ ಅವರು ರಕ್ತಚಂದನ ಕಳ್ಳ ಸಾಗಣೆ ದಂಧೆಯಲ್ಲಿ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಸ್ಮಗ್ಲಿಂಗ್ ಕಿಂಗ್ ಪಿನ್ ಕೊಂಡಪಲ್ಲಿ ಮಸ್ತಾನ್ ವಾಲಿಗೆ ನಟಿ ಸಹಕರಿಸುತ್ತಿದ್ದಾರೆ ಎನ್ನಲಾಗಿದೆ.
ಸದ್ಯ ಮಸ್ತಾನ್ ವಾಲಿ ನ್ಯಾಯಾಂಗ ಬಂಧನದಲ್ಲಿದ್ದು, ನಾಪತ್ತೆಯಾಗಿರುವ ನಟಿ ನೀತು ಅಗರ್ವಾಲ್ ಗಾಗಿ ಕರ್ನೂಲ್ ಪೊಲೀಸರು ಬೆಂಗಳೂರು, ಹೈದರಾಬಾದ್ ಹಾಗೂ ಮುಂಬೈನಲ್ಲಿ ಶೋಧ ನಡೆಸುತ್ತಿದ್ದಾರೆ.
ಪೊಲೀಸರು ಮಸ್ತಾನ್ ಡೈರಿ ಹಾಗೂ ದೂರವಾಣಿ ಕರೆಯನ್ನು ಪರಿಶೀಲಿಸಿದ್ದು, ರಕ್ತ ಚಂದನ ಕಳ್ಳತನಕ್ಕೆ ಸಂಬಂಧಿಸಿದ ಹಣವು ನೀತು ಅವರ ಬ್ಯಾಂಕ್ ಅಕೌಂಟ್ನಿಂದ ಕರ್ನೂಲಿನ ಕೆಲವು ಸ್ಥಳೀಯ ಅರಣ್ಯ ಚೋರರಿಗೆ ವರ್ಗಾವಣೆಗೊಂಡಿರುವ ಮಾಹಿತಿ ಲಭ್ಯವಾಗಿದೆ ಎನ್ನಲಾಗುತ್ತಿದೆ.
ಈ ಪ್ರಕರಣದಲ್ಲಿ ಈಗಾಗಲೇ ಬಂಧಿತರಾಗಿರುವ ಆರೋಪಿಗಳು ಈ ವಿಚಾರಣೆಯ ಸಂದರ್ಭದಲ್ಲಿ ನೀತು ಅವರ ಹೆಸರನ್ನು ಬಾಯ್ದಿಟ್ಟಿದ್ದು, ನಟಿಯ ಖಾತೆಯಿಂದ ಹಣ ವರ್ಗಾವಣೆಗೊಂಡಿದೆ ಎಂಬ ಆರೋಪ ಮಾಡಿದ್ದರು.
ರಕ್ತ ಚಂದನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಟಿ ನೀತು ವಿರುದ್ಧ ಇದುವರೆಗೂ ಪ್ರಕರಣ ದಾಖಲಿಸಿಲ್ಲ. ಆದರೆ ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಿದ ನಂತರ ನಟಿ ವಿರುದ್ಧ ದೂರು ದಾಖಲಿಸುವ ಚಿಂತನೆಯಲ್ಲಿದ್ದಾರೆ ಎನ್ನಲಾಗಿದೆ.
ಕಳೆದ ಎರಡು ತಿಂಗಳ ಹಿಂದೆ ರಕ್ತ ಚಂದನ ಕಳ್ಳಸಾಗಣೆ ಪ್ರಕರಣವನ್ನು ಭೇದಿಸಿದ್ದ ಆಂಧ್ರಪ್ರದೇಶ ಪೊಲೀಸರು 34 ರಕ್ತ ಚಂದನ ದಿಮ್ಮಿಗಳನ್ನು ಕರ್ನೂಲ್ನಲ್ಲಿ ವಶಪಡಿಸಿಕೊಂಡಿದ್ದರು. ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇತರ 8 ಮಂದಿಯನ್ನು ಬಂಧಿಸಲಾಗಿತ್ತು.
ಇತ್ತೀಚೆಗಷ್ಟೇ ತಮಿಳುನಾಡಿನ 20 ರಕ್ತಚಂದನ ಕಳ್ಳಸಾಗಣೆದಾರರನ್ನು ಆಂಧ್ರ ಪೊಲೀಸರು ಚಿತ್ತೂರು ಬಳಿಯ ಅರಣ್ಯದಲ್ಲಿ ಹತ್ಯೆ ಮಾಡುವುದರೊಂದಿಗೆ ರಕ್ತಚಂದನವು ಭಾರಿ ಸುದ್ದಿ ಮಾಡಿತ್ತು.
Advertisement