ಮೈಸೂರು: ರಾಜ್ಯದ 176 ತಾಲೂಕುಗಳ ಪೈಕಿ 150 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲು ಸರ್ಕಾರ ಮುಂದಾಗಿದೆ. ಕಂದಾಯ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಬುಧವಾರ ಈ ವಿಷಯ ತಿಳಿಸಿದರು.
ಮೊದಲು ರಾಜ್ಯದಲ್ಲಿ 98 ತಾಲೂಕುಗಳು ಬರಪೀಡಿತ ಎಂದು ತೀರ್ಮಾನಿಸಲಾಗಿತ್ತು. ಆ ನಂತರ ಈ ಸಂಖ್ಯೆ 114ಕ್ಕೆ ಆಯಿತು. ಈಗ ಆ ಸಂಖ್ಯೆಯು 126ಕ್ಕೆ ಹೆಚ್ಚಳವಾಗಿದೆ. ಬಹುಶಃ ಈ ಸಂಖ್ಯೆಯು 150 ತಲುಪಬಹುದು. ಈ ಕುರಿತು ಆ. 27ರಂದು ವಿಧಾನಸೌಧದಲ್ಲಿ ನಡೆಯುವ ಬರ ಕುರಿತ ಸಂಪುಟ ಉಪ ಸಮಿತಿ ಸಭೆಯಲ್ಲಿ ತೀರ್ಮಾನಿಸುತ್ತೇವೆ ಎಂದು ತಿಳಿಸಿದರು. ಬರ ಪರಿಹಾರಕ್ಕೆ ಸಂಬಂಧಿಸಿ ಕೇಂದ್ರದಿಂದ ಅನುದಾನ ಕೋರಲು ಮತ್ತೊಂದು ಸುತ್ತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು.
ರಾಜ್ಯದಲ್ಲಿ ಭೀಕರ ಬರಗಾಲವಿದೆ. ನಲವತ್ತು ವರ್ಷಗಳ ಬಳಿಕ ಈ ರೀತಿಯ ಬರದ ಸಂಕಷ್ಟ ಅನುಭವಿಸುವಂತಾಗಿದೆ. ಆದ್ದರಿಂದ ಕುಡಿಯುವ ನೀರು, ಜಾನುವಾರಿಗೆ ಮೇವು, ಕೃಷಿ ಕಾರ್ಮಿಕರಿಗೆ ಉದ್ಯೋಗ, ಬರಕ್ಕೆ ತುತ್ತಾದ ಬೆಳೆಗೆ ಅಗತ್ಯ ಪರಿಹಾರ ಕುರಿತು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳುತ್ತಿದ್ದೇವೆ. ಸೆ. 1 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಎಲ್ಲಾ ಇಲಾಖೆಗಳ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಗಳ ಸಭೆ ನಡೆಸುವರು ಎಂದು ಅವರು ತಿಳಿಸಿದರು.
ಘೋಷಣೆಗೆ ಮಾನದಂಡಗಳೇನು?
ಸತತವಾರ ಮಳೆ ಆಗಿರಬಾರದು, ನಿರ್ದಿಷ್ಟ ಅವಧಿಯಲ್ಲಿ ವಾಡಿಕೆಗಿಂತ ಶೇ.20 ರಷ್ಟು ಕಡಿಮೆ ಮಳೆ ಆಗಿರಬೇಕು, ಭೂಮಿಯಲ್ಲಿ ತೇವಾಂಶ ಕೊರತೆ, ಶೇ.50 ಕ್ಕಿಂತ ಕಡಿಮೆ ಇರಬೇಕು.
Advertisement