ನವದೆಹಲಿ: ತಮಿಳುನಾಡಿನಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಖಾಸಗಿ ಸುದ್ದಿ ವಾಹಿನಿಗಳು, ಆಕಾಶವಾಣಿ ಮತ್ತು ದೂರದರ್ಶನಕ್ಕೆ ಮಹತ್ವದ ಸೂಚನೆ ನೀಡಿದೆ.
ಈ ಬಗ್ಗೆ ಸಚಿವಾಲಯದ ಜಂಟಿ ಕಾರ್ಯದರ್ಶಿ ಆರ್.ಜಯಾ ಮನವಿ ಮಾಡಿದ್ದು, ಎಲ್ಲ ಖಾಸಗಿ ವಾಹಿನಿಗಳು ಮತ್ತು ಸರ್ಕಾರಿ ಸ್ವಾಮ್ಯದ ಚಾನೆಲ್ಗಳು ಆಗಾಗ ಈ ಬಗ್ಗೆ ಆದ್ಯತೆಯ ಮೇರೆಗೆ ಮಾಹಿತಿ ನೀಡುತ್ತಿರಬೇಕು. ಸದ್ಯ ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ವಾಹಿನಿಗಳು ಆಗಾಗ ಚೆನ್ನೈ ಮತ್ತು ತಮಿಳುನಾಡಿನ ಜನರಿಗೆ ಮಳೆಯಿಂದ ಉಂಟಾದ ತೊಂದರೆ ಮತ್ತು ಸಂಭಾವ್ಯ ಎಚ್ಚರಿಕೆಯನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೇಂದ್ರ ಜತೆ ನೆರವಾಗಬೇಕು. ಈ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಆಗುವ ನಷ್ಟವನ್ನು ತಡೆಯುವಲ್ಲಿ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಪ್ರಕಟವಾಗಲಿಲ್ಲ ಪತ್ರಿಕೆ
ದೇಶದ ಹಳೆ ಪತ್ರಿಕೆ `ದಿ ಹಿಂದೂ' ಚೆನ್ನೈ ಆವೃತ್ತಿ ಮಳೆಯ ಪರಿಣಾಮ ಬುಧವಾರ ಪ್ರಕಟಗೊಳ್ಳಲಿಲ್ಲ. 137 ವರ್ಷಗಳ ಈ ಪತ್ರಿಕೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ಮುದ್ರಣ ಸ್ಥಗಿತವಾಗಿದೆ. ಇದೇ ಮೊದಲ ಬಾರಿಗೆ ಹೀಗಾಗುತ್ತಿದೆ ಎಂದು ಪತ್ರಿಕೆಯ ಪ್ರಕಾಶಕ ಎನ್.ಮುರಳಿ ಬಿಬಿಸಿಗೆ ತಿಳಿಸಿದ್ದಾರೆ. ಪತ್ರಿಕೆ ಕಚೇರಿ ಇರುವ ಮರೈಮಲೈನಗರ್ ಪ್ರದೇಶಕ್ಕೆ ತಲುಪಲು ಸಿಬ್ಬಂದಿಗೆ ಅಸಾಧ್ಯವಾಯಿತು. ಒಂದು ವೇಳೆ ಮುದ್ರಿಸಿದ್ದರೂ ನಗರದಲ್ಲಿ ಪತ್ರಿಕೆ ಹಂಚಲು ಸಾಧ್ಯವಿರಲಿಲ್ಲ ಎಂದು ಮುರಳಿ ತಿಳಿಸಿದ್ದಾರೆ.
Advertisement