ನವದೆಹಲಿ: ಡಿಡಿಸಿಎ ಅವ್ಯವಹಾರ ಆರೋಪಕ್ಕೆ ಸಂಬಂಧಿಸಿ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ವಿರುದ್ಧ ಸಿವಿಲ್ ಹಾಗೂ ಕ್ರಿಮಿನಲ್ ಮಾನಹಾನಿ ಮೊಕದ್ದಮೆ ಹೂಡಲು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ನಿರ್ಧರಿಸಿದ್ದಾರೆ.
ಕೇಜ್ರಿವಾಲ್ ಅವರಿಗೆ ಯಾವುದೇ ಕಾನೂನು ನೋಟಿಸ್ ಕಳುಹಿಸದೇ, ನೇರವಾಗಿ ಮಾನಹಾನಿ ಮೊಕದ್ದಮೆ ಹೂಡುವುದಾಗಿ ವಿತ್ತ ಸಚಿವಾಲಯದ ಮೂಲಗಳು ತಿಳಿಸಿವೆ. ದೆಹಲಿ ಹೈಕೋಟ್ರ್ ನಲ್ಲಿ ಸಿವಿಲ್ ಕೇಸ್, ಪಟಿಯಾಲಾ ಹೌಸ್ ಕೋರ್ಟ್ನಲ್ಲಿ ಕ್ರಿಮಿನಲ್ ಕೇಸು ದಾಖಲಿಸಲು ನಿರ್ಧರಿಸಿರುವುದಾಗಿ ಮೂಲಗಳು ಹೇಳಿವೆ.
ಆರೋಪದಲ್ಲಿ ಹೊಸದೇನೂ ಇಲ್ಲ ಎಂದ ಡಿಡಿಸಿಎ: ಕೀರ್ತಿ ಆಜಾದ್ ಅವರ ಆರೋಪದಲ್ಲಿ ಹೊಸದೇನೂ ಇಲ್ಲ ಎಂದು ಡಿಡಿಸಿಎ ಹೇಳಿದೆ. ಆಜಾದ್ ಸುದ್ದಿಗೋಷ್ಠಿ ಬಗ್ಗೆ ಪ್ರತಿಕ್ರಿಯಿಸಿದ ಡಿಡಿಸಿಎ ಉಪಾಧ್ಯಕ್ಷ ಚೇತನ್ ಚೌಹಾಣ್, ಈ ಹಿಂದಿನ ತನಿಖೆಯಿಂದ ಗೊತ್ತಾದ ಅಂಶಗಳನ್ನೇ ಆಜಾದ್ ಮತ್ತೆ ಎತ್ತಿದ್ದಾರೆ.
ಆದರೆ, ಇವೇ ಆರೋಪಗಳ ಆಧಾರದಲ್ಲಿ ಎಸ್ ಪಿ ಬನ್ಸಲ್ ಅವರನ್ನು ಡಿಡಿಸಿಎ ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕಲಾಗಿತ್ತು ಎಂದು ಹೇಳಿದ್ದಾರೆ.