ನವದೆಹಲಿ: ದೆಹಲಿ ನಾಗರಿಕರಿಗೆ ವಿದ್ಯುತ್ ನೀರು ಹಾಗು ವಿದ್ಯುತ್ ದರದಲ್ಲಿ ಕಡಿತ ನೀಡುವುದು ಮಾತ್ರವಲ್ಲದೆ ಉಚಿತ ವೈಫೈ ಸೌಲಭ್ಯ ನೀಡುವುದಾಗಿ ಭರವಸೆ ನೀಡಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಶೀಘ್ರದಲ್ಲೇ ತಮ್ಮ ಭರವಸೆ ಪೂರೈಸುವುದಾಗಿ ಹೇಳಿದ್ದಾರೆ.
ಸಾಕೇತ್ನಲ್ಲಿ ಗಾರ್ಡನ್ ಟೂರಿಸಂ ಫೆಸ್ಟಿವೆಲ್ನ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಕೇಜ್ರಿವಾಲ್, ನೀರು ಮತ್ತು ವಿದ್ಯುತ್ ದರ ಕಡಿಮೆ ಮಾಡುವ ಬಗ್ಗೆ ನಾವೀಗಲೇ ಕಾರ್ಯ ಪ್ರವೃತ್ತರಾಗಿದ್ದಾರೆ. ಶೀಘ್ರದಲ್ಲೇ ನಾವು ದೆಹಲಿಯ ಜನರಿಗೆ ಶುಭ ಸುದ್ದಿಯನ್ನು ನೀಡಲಿದ್ದು, ಉತ್ತಮ ಆಡಳಿತಕ್ಕೆ ನಾವು ಬದ್ಧರಾಗಿದ್ದೇವೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ನಾವು ಚುನಾವಣೆ ವೇಳೆ ಭರವಸೆ ನೀಡಿದಂತೆ ಉಚಿತ ವೈಫೈ ವ್ಯವಸ್ಥೆಯನ್ನೂ ನೀಡುತ್ತೇವೆ. ಆದರೆ ಅದಕ್ಕೆ ಕನಿಷ್ಟ ಪಕ್ಷ 1 ವರ್ಷ ಬೇಕಾಗುತ್ತೆ.
ನಮ್ಮೂರಲ್ಲಿ ಯಾವಾಗ ಉಚಿತ ವೈಫೈ ಸಿಗುತ್ತೆ ಎಂದು ನನ್ನ ಮಕ್ಕಳು ಕೂಡಾ ಕೇಳುತ್ತಿರುತ್ತಾರೆ. ಈ ಬಗ್ಗೆ ನಾವು ಕಾರ್ಯ ಆರಂಭಿಸಿದ್ದು, ಸ್ವಲ್ಪ ಕಾಲಾವಕಾಶ ಬೇಕಾಗುತ್ತೆ. ಈ ಯೋಜನೆ ಕಾರ್ಯಗತವಾಗಲು 5 ವರ್ಷಗಳೇನೂ ಬೇಡ. ಇನ್ನೊಂದು ವರ್ಷ ಸಾಕು ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಕೆಲವು ದಿನಗಳ ಹಿಂದೆ ನೀವು ನಮಗೆ ಮತ ನೀಡಿ ಬಹುಮತದಿಂದ ಗೆಲ್ಲುವಂತೆ ಮಾಡಿದಿರಿ. ಬಹುದೊಡ್ಡ ಜವಾಬ್ದಾರಿ ನಮ್ಮ ಮೇಲಿದೆ. ನಾವು ಪ್ರತಿದಿನ ಮಾತಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದೇವೆ ಎಂದು ಕೇಜ್ರಿವಾಲ್ ನುಡಿದಿದ್ದಾರೆ.
Advertisement