ಗಣರಾಜ್ಯೋತ್ಸವ ವೇಳೆ ದಾಳಿಗೆ ಉಗ್ರರ ಸಂಚು: ಪಾಕ್‌ನಿಂದ 4 ತಂಡ ರವಾನೆ

ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರೊಬ್ಬರು ಗಣರಾಜ್ಯೋತ್ಸವದಲ್ಲಿ ಭಾಗವಹಿಸುತ್ತಿದ್ದು, ಈ ವೇಳೆ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಮತ್ತು ಈ ಸಂಬಂಧ ನಾಲ್ಕು ಉಗ್ರರ ತಂಡಗಳನ್ನು...
ಗಣರಾಜ್ಯೋತ್ಸವ ವೇಳೆ ದಾಳಿಗೆ ಉಗ್ರರ ಸಂಚು: ಪಾಕ್‌ನಿಂದ 4 ತಂಡ ರವಾನೆ
Updated on

ಮುಂಬೈ: ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರೊಬ್ಬರು ಗಣರಾಜ್ಯೋತ್ಸವದಲ್ಲಿ ಭಾಗವಹಿಸುತ್ತಿದ್ದು, ಈ ವೇಳೆ ದಾಳಿ ನಡೆಸಲು ಉಗ್ರರು ಸಂಚು ರೂಪಿಸಿದ್ದಾರೆ ಮತ್ತು ಈ ಸಂಬಂಧ ನಾಲ್ಕು ಉಗ್ರರ ತಂಡಗಳನ್ನು ಪಾಕಿಸ್ತಾನದಿಂದ ಭಾರತಕ್ಕೆ ರವಾನಿಸಲಾಗಿದೆ ಎಂಬ ಮಾಹಿತಿ ಗುಪ್ತಚರ ಸಂಸ್ಥೆಗಳಿಗೆ ಲಭ್ಯವಾಗಿದೆ.

ಜನವರಿ 28ರೊಳಗೆ ಭಾರತದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಉಗ್ರರು ಯೋಜನೆ ರೂಪಿಸಿರುವ ಬಗ್ಗೆ ಗುಪ್ತಚರ ಸಂಸ್ಥೆ ಮತ್ತು ಮುಂಬೈ ಪೊಲೀಸರಿಗೆ ಮಾಹಿತಿ ದೊರೆತಿದ್ದು, ವಿಮಾನ ನಿಲ್ದಾಣ, ಸಮುದ್ರ ತೀರ ಹಾಗೂ ಗಡಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.

ಮುಂಬೈ ಪೊಲೀಸರಿಗೆ ದೊರೆತಿರುವ ಮಾಹಿತಿ ಪ್ರಕಾರ, ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳಾದ ಜಾಮಾತ್-ಉದ್-ದಾವಾ, ಜೈಶ್-ಇ-ಮೊಹ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗಳು ಈಗಾಗಲೇ ನಾಲ್ಕು ತಂಡಗಳಲ್ಲಿ ಉಗ್ರರನ್ನು ಭಾರತಕ್ಕೆ ರವಾನಿಸಿವೆ.

ಉಗ್ರರ ನಾಲ್ಕು ತಂಡಗಳ ಪೈಕಿ ಒಂದು ತಂಡವನ್ನು ಮಹಾರಾಷ್ಟ್ರ, ಎರಡನೇ ತಂಡವನ್ನು ರಾಜಸ್ಥಾನ, ಮೂರನೇ ತಂಡವನ್ನು ಉತ್ತರ ಪ್ರದೇಶ ಹಾಗೂ ನಾಲ್ಕನೆ ತಂಡವನ್ನು ಒಡಿಶಾಗೆ ರವಾನಿಸಲಾಗಿದೆ. ಆದರೆ ಮುಂಬೈಯಲ್ಲಿ ವಿಶೇಷವಾಗಿ ಸಿದ್ಧಿವಿನಾಯಕ ದೇವಸ್ಥಾನವನ್ನು ಉಗ್ರರು ಗುರಿಯಾಗಿಸಿಕೊಂಡಿದ್ದು, ಯಾವುದೇ ಮಂಗಳವಾರ ದಾಳಿ ಮಾಡಬಹುದು ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ ಮುಂಬೈ ಪೊಲೀಸರು ದೇವಸ್ಥಾನದ ಸುತ್ತ ಭಾರಿ ಭದ್ರತೆ ಕೈಗೊಂಡಿದ್ದಾರೆ.

ಅಬ್ದುಲ್ಲಾ ಅಲ್-ಖುರೇಸಿ ನೇತೃತ್ವದ ಉಗ್ರರ ತಂಡ ಮುಂಬೈಗೆ ಆಗಮಿಸಿದ್ದು, ನಾಸಿರ್ ಅಲಿ, ಜಾಬೇದ್ ಇಖ್ಬಾಲ್, ಮೊಬಿದ್ ಜೇಮನ್ ಮತ್ತು ಶಮಾಶೇರ್ ಎಂಬ ಉಗ್ರರು ಈ ತಂಡದಲ್ಲಿದ್ದಾರೆ ಎನ್ನಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com