ಘಾಸಿಯಾಬಾದ್: ಕೇಂದ್ರದ ಮಾಜಿ ಸಚಿವೆ ಡಾ ಸರೋಜಿನಿ ಮಹಿಷಿ(88) ಅವರು ಉತ್ತರಪ್ರದೇಶದ ಘಾಸಿಯಾಬಾದ್ ನಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.
ಧಾರವಾಡ ಮೂಲದವರಾದ ಸರೋಜಿನಿ ಮಹಿಷಿ ಅವರು ಸ್ಥಳೀಯರಿಗೆ ಉದ್ಯೋಗ ಎಂಬ ಮಣ್ಣಿನ ಮಗ ನೀತಿಯನ್ನು ಪ್ರತಿಪಾದಿಸಿ ರಾಜ್ಯದೆಲ್ಲೆಡೆ ಸಂಚನಲವನ್ನು ಮೂಡಿಸಿದ್ದರು.
ಅಲ್ಲದೆ ರಾಜ್ಯ ಸರ್ಕಾರದ ಎಲ್ಲಾ ಹುದ್ದೆಗಳಲ್ಲೂ ನೂರಕ್ಕೆ ನೂರರಷ್ಟು ಕನ್ನಡಿಗರಿಗೆ ಮೀಸಲಾತಿ ಕಲ್ಪಿಸಬೇಕು. ಆಡಳಿತ ಭಾಷೆ ಕನ್ನಡವಾಗಿರಬೇಕು. ಕರ್ನಾಟಕದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳಲ್ಲೂ, ಖಾಸಗಿ ಸಂಸ್ಥೆಗಳಲ್ಲೂ ಹಾಗೂ ಬಹು ರಾಷ್ಟ್ರೀಯ ಸಂಸ್ಥೆಗಳಲ್ಲೂ ಕನ್ನಡಿಗರಿಗೆ ಉದ್ಯೋಗಾವಕಾಶಗಳನ್ನು ದೊರಕಿಸಿ ಕೊಡಲು ಮೀಸಲಾತಿ ಕಲ್ಪಿಸಬೇಕು ಎಂದು ತಮ್ಮ ವರದಿಯಲ್ಲಿ ಶಿಫಾರಸ್ಸು ಮಾಡಿದ್ದರು.
ಸದಾ ಕನ್ನಡ ಪರ ನಿಲುವು, ಕನ್ನಡ ಸಾಹಿತ್ಯ ಚಟುವಟಿಕೆಗಳಲ್ಲಿ ಆಸಕ್ತಿ ಹೊಂದಿದ್ದ ಡಾ ಸರೋಜಿನಿ ಮಹಿಷಿ ಅವರು ಡಾ ಡಿ. ವಿ. ಗುಂಡಪ್ಪ ಅವರ ಮಂಕು ತಿಮ್ಮನ ಕಗ್ಗವನ್ನು ಹಿಂದಿ ಭಾಷೆಗೆ ತರ್ಜುಮೆ ಮಾಡಿದ್ದರು.
ಧಾರವಾಡ ಉತ್ತರ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸತ್ತು ಪ್ರವೇಶಿಸಿದ್ದ ಡಾ ಸರೋಜಿನಿ ಮಹಿಷಿ ಅವರು ರಾಜ್ಯಸಭಾ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಡಾ ಸರೋಜಿನಿ ಮಹಿಷಿ ಅವರ ನಿಧನದಿಂದ ಕನ್ನಡತನದ ಬಗ್ಗೆ ಅಪಾರ ಪ್ರೀತಿ ಹಾಗೂ ಗೌರವವಿದ್ದ ದಿಟ್ಟ ಮಹಿಳೆ ಅಸ್ತಂಗತರಾಗಿದ್ದಾರೆ.
ಕೇಂದ್ರದ ಮಾಜಿ ಸಚಿವೆ ಡಾ ಸರೋಜಿನಿ ಮಹಿಷಿ ಅವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಂಬಿನಿ ಮಿಡಿದಿದ್ದಾರೆ.
Advertisement