ನವದೆಹಲಿ: ವ್ಯಾಪಂ ಹಗರಣವನ್ನು ದಾಖಲು ಮಾಡುತ್ತಿದ್ದ ದಿವಂಗತ ಪತ್ರಕರ್ತ ಅಕ್ಷಯ್ ಸಿಂಗ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಮಧ್ಯಪ್ರದೇಶದ ಸಚಿವ ಕೈಲಾಶ್ ವಿಜಯ್ವಾರ್ಗಿಯಾ, ತಮ್ಮ ಹೇಳಿಕೆಯಿಂದ ಹಿಂದೆ ಸರಿದಿದ್ದು ಅದೊಂದು ಹಾಸ್ಯ ಸನ್ನಿವೇಶ, ನನ್ನ ಹೇಳಿಕೆಯನ್ನು ತಿರುಚಲಾಗಿದೆ ಎಂದಿದ್ದಾರೆ.
"ನನ್ನ ಹೇಳಿಕೆ ತಿರುಚಲಾಗಿದೆ. ನಾನು ಮತ್ತೊಬ್ಬ ಪತ್ರಕರ್ತನ ಜೊತೆ ಹಾಸ್ಯ ಮಾಡುತ್ತಿದ್ದೆ. ಅದು ಮೃತ ಅಕ್ಷಯ್ ಸಿಂಗ ಅವರ ಬಗ್ಗೆ ಹೇಳಿದ್ದಲ್ಲ. ನಾನಿದನ್ನು ತೀವ್ರವಾಗಿ ಖಂಡಿಸುತ್ತೇನೆ" ಎಂದು ವಿಜಯ್ವಾರ್ಗಿಯಾ ಹೇಳಿದ್ದಾರೆ.
ಇದಕ್ಕೂ ಮುನ್ನ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಅವರ ಸಮ್ಮುಖದಲ್ಲಿಯೇ ಮೃತ ಪತ್ರಕರ್ತ ಅಕ್ಷಯ್ ಸಿಂಗ್ ಬಗ್ಗೆ ಪ್ರತಿಕ್ರಿಯಿಸಿ "ಪತ್ರಕರ್ತ ನನಗಿಂತಲೂ ದೊಡ್ಡವನೇ" ಎಂಬ ಅವಹೇಳನಕಾರಿ ಹೇಳಿಕೆ ನೀಡಿದ್ದರು.
ದೆಹಲಿ ಮೂಲದ ಸುದ್ದಿ ಸಂಸ್ಥೆಯೊಂದಕ್ಕೆ ಕೆಲಸ ಮಾಡುತ್ತಿದ್ದ ಅಕ್ಷಯ್ ಸಿಂಗ್ ವ್ಯಾಪಂ ಹಗರಣದಲ್ಲಿ ಹೆಸರು ಕೇಳಿಬಂದಿದ್ದ ಯುವತಿಯೊಬ್ಬಳ ದೇಹ ರೈಲ್ವೇ ಟ್ರ್ಯಾಕ್ ಬಳಿ ನಿಗೂಢವಾಗಿ ಪತ್ತೆಯಾಗಿದ್ದಾಗ ಸಂತ್ರಸ್ತಳ ಪೋಷಕರನ್ನು ಸಂದರ್ಶನ ನಡೆಸಿದ ದಿನವೇ ಶನಿವಾರ ನಿಗೂಢವಾಗಿ ಮೃತಪಟ್ಟಿದ್ದ.
ವ್ಯಾಪಂ ಹಗರಣದಲ್ಲಿ ಸಂಬಂಧಪಟ್ಟಂತೆ ಇಲ್ಲಿಯವರೆಗಿನ ನಿಗೂಢ ಸಾವಿನ ಸಂಖ್ಯೆ ೪೦ ದಾಟಿದೆ.
Advertisement