ನೀವು ಓದಲೇ ಬೇಕಾದ ಅಬ್ದುಲ್ ಕಲಾಂರ ಐದು ಪುಸ್ತಕಗಳು

ಬಡ ಕುಟುಂಬದ ಹುಡಗನೊಬ್ಬ ಹೇಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಪ್ರಮುಖ ವಿಜ್ಞಾನಿಯಾದ ಎಂಬ...
ಕಲಾಂ ಅವರ ಪುಸ್ತಕಗಳು
ಕಲಾಂ ಅವರ ಪುಸ್ತಕಗಳು
Updated on

ಬಡ ಕುಟುಂಬದಿಂದ ಬಂದ ಹುಡುಗ ಡಾ.ಎಪಿಜೆ ಅಬ್ದುಲ್ ಕಲಾಂ ಎಂದೇ ಖ್ಯಾತರಾಗಿರುವ ಆವುಲ್ ಫಕೀರ್ ಜಲಾಲುದ್ದೀನ್ ಅಬ್ದುಲ್ ಕಲಾಂ. ದೇಶದ 'ಮಿಸೈಲ್ ಮ್ಯಾನ್ ' ಎಂಬ ಹೆಗ್ಗಳಿಕೆಗೆ ಪಾತ್ರವಾದ ಕಲಾಂ, ಭಾರತದಲ್ಲಿ ವೈಜ್ಞಾನಿಕ ಕ್ರಾಂತಿಗೆ ನಾಂದಿ ಹಾಡಿದವರು. ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿ ದೇಶದ ಏಳ್ಗೆಗೆ ನಿರಂತರವಾಗಿ ದುಡಿದವರು. ತನ್ನಲ್ಲಿರುವ ಜ್ಞಾನವನ್ನು ಮುಂದಿನ ಪೀಳಿಗೆಗೆ ದಾಟಿಸಬೇಕೆಂಬ ಅದಮ್ಯ ಉತ್ಸಾಹ ಹೊತ್ತುಅದನ್ನು ಸದಾ ಪಾಲಿಸಿಕೊಂಡು ಬಂದ ಕಲಾಂ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಈ 5 ಪುಸ್ತಕಗಳನ್ನು ಪ್ರತಿಯೊಬ್ಬ ಭಾರತೀಯನೂ ಓದಲೇ ಬೇಕು.


ವಿಂಗ್ಸ್ ಆಫ್ ಫಯರ್

ಕಲಾಂ ಅವರ ಆತ್ಮಕತೆ ಇದು. ಹಲವಾರು ಭಾಷೆಗಳಿಗೆ ಈ ಪುಸ್ತಕ ಅನುವಾದಗೊಂಡಿದ್ದು ಕನ್ನಡದಲ್ಲಿ 'ಅಗ್ನಿಯ ರೆಕ್ಕೆಗಳು' ಎಂಬ ಹೆಸರಿನಲ್ಲಿ ಲಭ್ಯವಿದೆ. ಬಡ ಕುಟುಂಬದ ಹುಡಗನೊಬ್ಬ ಹೇಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಪ್ರಮುಖ ವಿಜ್ಞಾನಿಯಾದ ಎಂಬ ಬದುಕಿನ ಕಥೆ ಇಲ್ಲಿದೆ. ದೇಶಕ್ಕೆ ದೇಶವೇ ಹೆಮ್ಮೆ ಪಡುವ ವಿಜ್ಞಾನಿಯಾದ ಆತ ಅನಂತರ ರಾಷ್ಟ್ರಪತಿಯಾಗಿದ್ದು ಹೇಗೆ? ಅವರ ಬದುಕಿನ ಸವಾಲುಗಳು, ಸ್ಪೂರ್ತಿ ನೀಡುವ ಮಾತುಗಳು ಎಲ್ಲವೂ ಇನ್ನೊಬ್ಬರಿಗೆ ಆಶಾಕಿರಣವಾಗುತ್ತವೆ. ಈ ಪುಸ್ತಕದಲ್ಲಿ ಕಲಾಂ ಅವರ ಜೀವನದ ಕತೆ ಮಾತ್ರವಲ್ಲ ಭಾರತೀಯ ಬಾಹ್ಯಾಕಾಶ ಕೇಂದ್ರದಲ್ಲಿ ದುಡಿದ ಪ್ರಮುಖ ವಿಜ್ಞಾನಿಗಳಾದ  ಡಾ. ವಿಕ್ರಂ ಸಾರಾಭಾಯಿ ಮತ್ತು ಡಾ. ಬ್ರಹ್ಮ ಪ್ರಕಾಶ್ ಅವರ ಬಗ್ಗೆಯೂ  ಸಾಕಷ್ಟು ತಿಳಿದುಕೊಳ್ಳಬಹುದಾಗಿದೆ

ಇಗ್ನೈಟೆಡ್ ಮೈಂಡ್ಸ್


2002ರಲ್ಲಿ ಬಿಡುಗಡೆಯಾದ ಪುಸ್ತಕವಿದು. ದೇಶದಾದ್ಯಂತವಿರುವ ವಿದ್ಯಾರ್ಥಿಗಳನ್ನು ಭೇಟಿ ಮಾಡಿದಾಗ ಕಲಾಂಗೆ ಆಗಿರುವ ಅನುಭವಗಳನ್ನು ಇಲ್ಲಿ ವಿವರಿಸಲಾಗಿದೆ. ದೇಶದ ವಿವಿಧ ಭಾಗಗಳ ಜನರನ್ನು ಭೇಟಿಯಾಗುವ ಮೂಲಕ ಅಲ್ಲಿನ ಜನರ ಸಾಮರ್ಥ್ಯವನ್ನು ಅರಿತುಕೊಳ್ಳುವಂತಾಯಿತು. ಜನರ ಈ ಸಾಮರ್ಥ್ಯದಿಂದ ನಮ್ಮ ದೇಶ ಪ್ರಗತಿಶೀಲ ದೇಶವಾಗಿ ಮೆರೆಯಬಹುದು ಎಂಬುದು ಕಲಾಂ ಅಭಿಪ್ರಾಯ. ಅಮ್ಮನ ಗರ್ಭದಲ್ಲಿರುವ ಸ್ವಾಭಿಮಾನ ಮತ್ತು ಹುಮ್ಮಸ್ಸು ಎಂಬ ಎರಡು ಭ್ರೂಣಗಳ ನಡುವಿನ ಸಂಭಾಷಣೆಯ ಮೂಲಕ ಈ ಪುಸ್ತಕ ಕೊನೆಗೊಳ್ಳುತ್ತದೆ. ನಾವು ನಮ್ಮ ಕಣ್ಣಿಗೆ ಕಾಣುವ ವಸ್ತುಗಳನ್ನು ನೋಡಿ ಅಭಿಪ್ರಾಯ ವ್ಯಕ್ತ ಪಡಿಸುವುದು ಮಾತ್ರವಲ್ಲ ಒಳಗಣ್ಣಿನಿಂದ ನೋಡುವ ತಾಕತ್ತು ನಮ್ಮಲ್ಲಿರಬೇಕು ಎಂದು ಈ ಪುಸ್ತಕ ಹೇಳುತ್ತದೆ.

ಇನ್‌ಡೋಮಿಟೇಬಲ್ ಸ್ಪಿರಿಟ್

ಕಲಾಂ ಅವರ ದೃಷ್ಟಿಕೋನಗಳು, ಆದರ್ಶ ಮತ್ತು ಗುರಿಯ ಬಗ್ಗೆ ಇಲ್ಲಿ ಹೇಳಲಾಗಿದೆ. ಹೆಣ್ಣೆಂದರೆ ಅದು ದೇವರ ಅದ್ಬುತ ಸೃಷ್ಟಿ ಎಂದು ಹೇಳಿದವರು ಕಲಾಂ. ಪ್ರಸ್ತುತ ಪುಸ್ತಕದಲ್ಲಿ ರಾಮೇಶ್ವರಂನ ಕಡಲ ಕಿನಾರೆಯಿಂದ ರಾಷ್ಟ್ರಪತಿಭವನದವರೆಗಿನ ಪಯಣದ ಬಗ್ಗೆ ಬರೆಯಲಾಗಿದೆ.


ಇಂಡಿಯಾ 2020

202ರ ವೇಳೆಯಲ್ಲಿ ಭಾರತ ಅಭಿವೃದ್ಧಿಶೀಲ ದೇಶಗಳ ಪಟ್ಟಿಯಲ್ಲಿ ಸೇರಬೇಕು ಎಂಬ ಕಲಾಂ ಆಶಯದ ಬಗ್ಗೆ ಇಲ್ಲಿ ಹೇಳಲಾಗಿದೆ. ದೇಶದಲ್ಲಿನ ಸಾಧನೆಗಳ ಹಲವು ಅಂಕಿ ಅಂಶಗಳನ್ನು ಇಲ್ಲಿ ನೀಡಲಾಗಿದ್ದು, 'ವಿಶನ್ 2020' ಆಶಯವನ್ನು ಸಾಧಿಸುವುದು ನಮಗೆ ಕಷ್ಟವೇನಲ್ಲ ಎಂಬುದನ್ನು ಕಲಾಂ ಇಲ್ಲಿ ಹೇಳಿದ್ದಾರೆ. ಭಾರತದಲ್ಲಿನ ಹಸಿರು ಕ್ರಾಂತಿ ಮತ್ತು ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತದ ಸಾಧನೆಯ ಬಗೆಗಿನ ಚಿತ್ರಣ ಇದರಲ್ಲಿದೆ.


ಟರ್ನಿಂಗ್ ಪಾಯಿಂಟ್ಸ್
ವಿಂಗ್ಸ್  ಆಫ್  ಫಯರ್‌ನ ಮುಂದುವರಿದ ಭಾಗವೇ ಟರ್ನಿಂಗ್ ಪಾಯಿಂಟ್ಸ್. ಕಲಾಂ ಅವರು ರಾಷ್ಟ್ರಪತಿಯಾದಾಗ ಆ ಅನುಭವದ ಬಗ್ಗೆ ಇಲ್ಲಿ ವಿವರಿಸಲಾಗಿದೆ. ವಿಶನ್ 2020ಗೆ ಇರುವ ನೀಲನಕ್ಷೆಯಂತಿರುವ ಈ ಪುಸ್ತಕದಲ್ಲಿ ಭಾರತ ತಂತ್ರಜ್ಞಾನದಲ್ಲಿ ಮುನ್ನಡೆಯಬೇಕಾದರೆ ಏನೆಲ್ಲಾ ಮಾಡಬೇಕೆಂಬುದನ್ನು ವಿವರಿಸಲಾಗಿದೆ.  ಅದೇ ವೇಳೆ ಇ-ಗವರ್ನಮೆಂಟ್ ಮತ್ತು ಭಾರತದಲ್ಲಿನ ದೈನಂದಿನ ಸಮಸ್ಯೆಗಳನ್ನು ಹೇಗೆ ಪರಿಹರಿಸಬಹುದು ಎಂಬುದಾಗಿಯೂ ಹೇಳಲಾಗಿದೆ.


-ರಶ್ಮಿ ಕಾಸರಗೋಡು




Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com