ರಾಮೇಶ್ವರಂ: ದೇಶ ಕಂಡ ಅಪ್ರತಿಮ, ಜನಮನದ ರಾಷ್ಟ್ರಪತಿ, ವಿಜ್ಞಾನಿ, ಭಾರತ ರತ್ನ ಡಾ.ಎಪಿಜೆ ಅಬ್ದುಲ್ ಕಲಾಂ ಅವರು ಗುರುವಾರ ಮಧ್ಯಾಹ್ನ ಮಣ್ಣಲ್ಲಿ ಮಣ್ಣಾದರು.
ಸೋಮವಾರ ಸಂಜೆ ಮೇಘಾಲಯದ ಶಿಲಾಂಗ್ ನಲ್ಲಿ ಹೃದಯಾಘತದಿಂದ ನಿಧನರಾಗಿದ್ದ ಕಲಾಂ ಅವರ ಅಂತ್ಯಕ್ರಿಯೆ ಇಂದು ಮಧ್ಯಾಹ್ನ ತಮಿಳುನಾಡಿನ ರಾಮೇಶ್ವರಂನಿಂದ 6 ಕಿ.ಮೀ ದೂರದಲ್ಲಿರುವ ಪೆಯಿಕುರುಂಬುನ ಪೆರಿಯಗುಂಡು ಮೈದಾನದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು. ಅಂತ್ಯಕ್ರಿಯೆಯಲ್ಲಿ ಕಲಾಂ ಕುಟುಂಬಸ್ಥರು ಭಾಗವಹಿಸಿದ್ದರು.
ರಾಮೇಶ್ವರಂನಲ್ಲಿ ಅಂತಿಮ ದರ್ಶನದ ಬಳಿಕ ಕಲಾಂ ಅವರ ನಿವಾಸದಿಂದ ಇಂದು ಬೆಳಗ್ಗೆ 10.30ರ ಸುಮಾರಿಗೆ ಸೇನಾ ವಿಶೇಷ ವಾಹನದಲ್ಲಿ ಮೃತದೇಹವನ್ನು ಮೆರವಣಿಗೆ ಮೂಲಕ ಪೆರಿಯಗುಂಡು ಮೈದಾನಕ್ಕೆ ತರಲಾಗಿತ್ತು. ನಂತರ ಮುಸ್ಲಿಂ ಧರ್ಮ ಗುರುಗಳ ನೇತೃತ್ವದಲ್ಲಿ ಮುಸ್ಲಿಂ ಧಾರ್ಮಿಕ ವಿಧಿವಿಧಾನದಂತೆ ಕಲಾಂ ಅವರ ಅಂತ್ಯಸಂಸ್ಕಾರ ನಡೆಯಿತು.
ಅಂತ್ಯಕ್ರಿಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಮನೋಹರ ಪರಿಕ್ಕರ್, ವೆಂಕಯ್ಯ ನಾಯ್ಡು, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತಮಿಳುನಾಡು ರಾಜ್ಯಪಾಲ ಕೆ.ರೋಸಯ್ಯ, ತಮಿಳುನಾಡು ಹಣಕಾಸು ಸಚಿವ ಓ ಪನ್ನೀರ್ ಸೆಲ್ವಂ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
Advertisement