ಲಿಬಿಯಾ: ಲಿಬಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರಿಂದ ಅಪಹರಣಕ್ಕೊಳಗಾಗಿರುವ ನಾಲ್ವರು ಭಾರತೀಯರ ಪೈಕಿ ಇಬ್ಬರು ಕನ್ನಡಿಗರು ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
ವಿಜಯ್ ಕುಮಾರ್ ಬೆಂಗಳೂರು ನಿವಾಸಿ ಹಾಗೂ ಲಕ್ಷ್ಮಿಕಾಂತ್ ರಾಯಚೂರಿನ ನಿವಾಸಿಯಾಗಿದ್ದಾರೆ. ಮತ್ತಿಬ್ಬರು ಹೈದರಬಾದಿನವರು ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ಮಾಹಿತಿ ನೀಡಿದ್ದಾರೆ.
ಇರಾಕ್ ಮತ್ತು ಸಿರಿಯಾದಲ್ಲಿ ವಿದ್ವಂಸಕ ಕೃತ್ಯಗಳನ್ನು ಎಸಗುವ ಮೂಲಕ ಅಟ್ಟಹಾಸ ಮೆರೆಯುತ್ತಿರುವ ಇಸಿಸ್ ಉಗ್ರರು ಭಾರತದ ಮೇಲೆ ದಾಳಿ ನಡೆಸುವ ಸಂಚು ರೂಪಿಸಿದ್ದಾರೆ ಎಂಬ ಆಘಾತಕಾರಿ ಸುದ್ದಿಯ ಬೆನ್ನಲ್ಲೇ ಲಿಬಿಯಾದಲ್ಲಿ ಇಸಿಸ್ ಉಗ್ರರು ನಾಲ್ವರು ಭಾರತೀಯರನ್ನು ಅಪಹರಿಸಿದ್ದರು.
ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರಾಗಿದ್ದ ನಾಲ್ವರು ಭಾರತೀಯರನ್ನು ನಿನ್ನೆ ಲಿಬಿಯಾದ ಟ್ರೈಪೋಲೀಯ ಸಿರ್ತೆ ನಗರದಿಂದ ಇಸಿಸ್ ಭಯೋತ್ಪಾದಕರು ಅಪಹರಿಸಿದ್ದರು.
ಅಪಹರಣದ ಬಗ್ಗೆ ಲಿಬಿಯಾ ದೇಶದೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಭಾರತೀಯರ ರಕ್ಷಣೆ ಕುರಿತಂತೆ ಲಿಬಿಯಾ ದೇಶದೊಡನೆ ಭಾರತ ಚರ್ಚಿಸುತ್ತಿದೆ ಎಂದು ತಿಳಿಸಿದ್ದಾರೆ.
Advertisement