
ವಿಧಾನಸಭೆ: ವಿಧಾನಮಂಡಲದ ಉಭಯ ಸದನಗಳಲ್ಲಿ ಗುರುವಾರ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಹಾಗೂ ಮಾಜಿ ಸಚಿವ ವಸಂತ ಸಾಲಿಯಾನ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಮೃತರ ಗುಣಗಾನದ ಬಳಿಕ ವಿಧಾನಸಭೆಯಲ್ಲಿ ಒಂದು ನಿಮಿಷ ಮೌನ ಆಚರಿಸಿ 10 ನಿಮಿಷ ಸದನ ಮುಂದೂಡಲಾಯಿತು. ಆದರೆ, ಮೇಲ್ಮನೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಿ ಕಲಾಪ
ಕೈಗೆತ್ತಿಕೊಳ್ಳಲಾಯಿತು. ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಸ್ಪೀಕರ್ ಅವರು ಮಾಜಿ ರಾಷ್ಟ್ರಪತಿ ಹಾಗೂ ಮಾಜಿ ಸಚಿವ ವಸಂತ ವಿ. ಸಾಲಿಯಾನ ಅವರ ನಿಧನಕ್ಕೆ ಸಂತಾಪ ಸೂಚಕ ನಿರ್ಣಯ ಮಂಡಿಸಿದರು. ಕ್ಷಿಪಣಿ ಮಾನವ, ಜನರ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಕಲಾಂ ಅವರು ತಂತ್ರಜ್ಞಾನ ಕ್ಷೇತ್ರದಲ್ಲದೆ ಹೃದಯ ಕಾಯಿಲೆಗೆ ಸಂಬಂಧಿಸಿದ ಕೊರೊನರಿ ಸ್ಟಂಟ್ ಅಭಿವೃದ್ಧಿ ಹಾಗೂ ಗ್ರಾಮೀಣ ಆರೋಗ್ಯ ಸೇವೆಗೆ ವಿಶೇಷ ಟ್ಯಾಬ್ಲೆಟ್ ವಿನ್ಯಾಸ ಕಾರ್ಯಗಳಲ್ಲಿ ಕೈಜೋಡಿಸಿದ್ದರು. ರಾಷ್ಟ್ರಪತಿ ಪದವಿಗೆ ಹೊಸ ಅರ್ಥ, ಹೊಳಪನ್ನು ನೀಡಿ ಮತ್ತೊಂದು ಘನತೆ ತಂದುಕೊಟ್ಟರು. ರಾಷ್ಟ್ರಪತಿ ಭವನವನ್ನು ಜನಸಾಮಾನ್ಯರಿಗೆ ತೆರೆದಿಟ್ಟು, ದೇಶಕ್ಕೆ ಹೊಸ ಉತ್ಸಾಹ ತುಂಬಿದರು ಎಂದು ಬಣ್ಣಿಸಿದರು.
ವಿಧಾನಸಭೆ ಹಾಗೂ ಪರಿಷತ್ನ ಜಂಟಿ ಅಧಿವೇಶನ ಉದ್ದೇಶಿಸಿ 2005ರ ನವೆಂಬರ್ 20ರಂದು ಭಾಷಣ ಮಾಡಿ, 11 ಧ್ಯೇಯೋದ್ದೇಶಗಳ ಸಲಹೆ ನೀಡಿದ್ದರು. 2008ರಲ್ಲಿ ಶಾಸಕರಿಗಾಗಿ ಆಯೋಜಿಸಿದ್ದ ತರಬೇತಿ ಶಿಬಿರ ಉದ್ಘಾಟಿಸಿ, `ನಾನು ಭ್ರಷ್ಟಾಚಾರ ಮುಕ್ತವಾದ ಬದುಕು ನಡೆಸುತ್ತ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಲ್ಲರಿಗೂ ಮಾದರಿಯಾಗುತ್ತೇನೆ' ಎಂದು ಶಾಸಕರಿಂದ ಪ್ರತಿಜ್ಞೆ ಮಾಡಿಸಿದ್ದರು. ವಿಷನ್-2020 ಮೂಲಕ ಕೃಷಿಯಿಂದ ವಿಜ್ಞಾನದವರೆಗೆ ಭಾರತದ ಭವಿಷ್ಯ ಹೇಗಿರಬೇಕು ಎಂಬ ನೀಲನಕ್ಷೆಯನ್ನೂ ರಾಷ್ಟ್ರದ ಮುಂದಿಟ್ಟಿದ್ದರು ಎಂದು ಸ್ಪೀಕರ್ ಹೇಳಿದರು.
ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್, ನಗರಾಭಿವೃದ್ಧಿ ಸಚಿವ ವಿನಯïಕುಮಾರ್ ಸೊರಕೆ, ವೈ.ಎಸ್.ವಿ. ದತ್ತ, ಕೆ.ಎಸ್. ಪುಟ್ಟಣ್ಣಯ್ಯ, ಎನ್. ಚಲುವರಾಯಸ್ವಾಮಿ, ಬಿ.ಆರ್. ಪಾಟೀಲ್, ಗೋವಿಂದ ಕಾರಜೋಳ, ಸಿ.ಟಿ. ರವಿ, ಎ.ಎಸ್. ಪಾಟೀಲ್ ನಡಹಳ್ಳಿ, ಮಾಲೀಕಯ್ಯ ಗುತ್ತೇದಾರ್, ರಾಜೀವ್ ಮೃತರ ಗುಣಗಾನ ಮಾಡಿದರು.
Advertisement