ಕೋಲ್ಕತ್ತ: ವಿವಾದಾತ್ಮಕ ಬಾಂಗ್ಲಾದೇಶ ಲೇಖಕಿ ತಸ್ಲಿಮಾ ನಸ್ರೀನ್ ತಮ್ಮ ದೇಶದಿಂದ ಜೀವ ಬೆದರಿಕೆ ಕರೆಗಳನ್ನು ಸ್ವೀಕರಿಸಿದ್ದರಿಂದ ಅಮೆರಿಕಾಕ್ಕೆ ಸ್ಥಳಾಂತರವಾಗಿದ್ದು, ನಾನು ಭಾರತವನ್ನು ಖಾಯಂ ಆಗಿ ತೊರೆದಿಲ್ಲ, ಸುರಕ್ಷಿತ ಎಂದೆನಿಸಿದಾಗ ಮತ್ತೆ ವಾಪಸಾಗುತ್ತೇನೆ ಎಂದಿದ್ದಾರೆ.
"ಬಾಂಗ್ಲಾದೇಶದ ನಾಸ್ತಿಕ ಬ್ಲಾಗರ್ ಒಬ್ಬನನ್ನು ಕೊಂದ ಇಸ್ಲಾಂ ತೀವ್ರವಾದಿಗಳು ಬೆದರಿಕೆ ಹಾಕಿದ್ದರು. ಭೀತಿಯುಂಟಾಗಿತ್ತು. ಭಾರತೀಯ ಸರ್ಕಾರವನ್ನು ಭೇಟಿ ಮಾಡಬೇಕಿತ್ತು. ಅವಕಾಶ ಸಿಗುತ್ತಿಲ್ಲ. ಅದಕ್ಕೆ ಭಾರತ ಬಿಟ್ಟೆ. ಸುರಕ್ಷಿತ ಎಂದೆನಿಸಿದಾಗ ಹಿಂದಿರುಗುತ್ತೇನೆ" ಎಂದು ನಸ್ರೀನ್ ಟ್ವೀಟ್ ಮಾಡಿದ್ದಾರೆ.
ಫೆಬ್ರವರಿಯಿಂದೀಚೆಗೆ ಮೂವರು ಜಾತ್ಯಾತೀತ ಬ್ಲಾಗರ್ ಗಳನ್ನು ಕೊಂದ ತೀವ್ರವಾದಿಗಳಿಂದ ಬೆದರಿಕೆ ಇದ್ದದ್ದರಿಂದ ಅವರನ್ನು ಭಾರತದಿಂದ ಅಮೆರಿಕಾಕ್ಕೆ ವರ್ಗಾಯಿಸಲಾಗಿದೆ ಎಂದು ನ್ಯೂಯಾರ್ಕ್ ಮೂಲದ ವಕಾಲತ್ತು ಸಂಸ್ಥೆಯೊಂದು ನೆನ್ನೆ ತಿಳಿಸಿತ್ತು.
"ನಾನು ಅಮೆರಿಕಾಕ್ಕೆ ಉಪನ್ಯಾಸಗಳನ್ನು ನೀಡಲು ಹಾಗು ನನ್ನ ಕುಟುಂಬ ವರ್ಗದವರನ್ನು ಕಾಣಲು ಆಗಾಗ ಹೋಗುತ್ತಿರುತ್ತೇನೆ. ನಾನು ಭಾರತವನ್ನು ಶಾಶ್ವತವಾಗಿ ತೊರೆದಿಲ್ಲ. ಭಾತೀಯ ಸರ್ಕಾರ ಯಾವಾಗಲು ರಕ್ಷಣೆ ನೀಡುತ್ತದೆ" ಎಂದು ತಮ್ಮ ಪುಸ್ತಕಗಳಾದ ಲಜ್ಜಾ ಮತ್ತು ದ್ವಿಕಂಡಿತೊ ಮೂಲಕ ತೀವ್ರವಾದಿಗಳ ಆಕ್ರೋಶಕ್ಕೆ ತುತ್ತಾಗಿರುವ ತಸ್ಲಿಮಾ ಇನ್ನೊಂದು ಟ್ವೀಟ್ ನಲ್ಲಿ ಬರೆದಿದ್ದಾರೆ.
೫೨ ವರ್ಷದ ಈ ಬರಹಗಾರ್ತಿ ಮುಸ್ಲಿಂ ತೀವ್ರವಾದಿಗಳಿಂದ ಜೀವ ಬೆದರಿಕೆಯನ್ನು ಎದುರಿಸುತ್ತಿದ್ದು ೧೯೯೪ ರಿಂದ ಅಜ್ಞಾತವಾಸದಲ್ಲಿ ಬದುಕುತ್ತಿದ್ದಾರೆ.
ಯೂರೋಪಿನಲ್ಲಿ ದೀರ್ಘ ಕಾಲದವೆರೆಗೆ ಬದುಕಿದ್ದು ೨೦೦೪ ರಲ್ಲಿ ಭಾರತಕ್ಕೆ ಬಂದಿದ್ದರು. ಕೋಲ್ಕತ್ತವನ್ನು ತಮ್ಮ ಮನೆ ಎಂದು ಕರೆದುಕೊಂಡಿದ್ದ ಲೇಖಕಿ ಕೆಲವು ಮುಸ್ಲಿಂ ಸಂಘಟನೆಗಳ ಪ್ರತಿಭಟನೆಯಿಂದ ಕೋಲ್ಕತ್ತವನ್ನು ೨೦೦೭ ರಲ್ಲಿ ತೊರೆದಿದ್ದರು. ನಂತರ ದೆಹಲಿಯಲ್ಲಿನ ಅಪರಿಚಿತ ಪ್ರದೇಶದಲ್ಲಿ ಕೆಲವು ತಿಂಗಳು ಕಳೆದು ಸ್ವೀಡನ್ ದೇಶ ಅವರಿಗೆ ನಾಗರಿಕ ಸ್ಥಾನಮಾನ ನೀಡಿದ ಮೇಲೆ ಅಲ್ಲಿಗೂ ಕೂಡ ತೆರಳಿ ವಾಸವಾಗಿದ್ದರು.
Advertisement