6 ಸಾವಿರ ಕೋಟಿ ಸಾಲ:ರೈತರ ಬಾಕಿ ಪಾವತಿಗಾಗಿ ಸಕ್ಕರೆ ಕಾರ್ಖಾನೆಗಳಿಗೆ ಕೇಂದ್ರ ನೆರವು

ಕರ್ನಾಟಕ ಸೇರಿದಂತೆ ಕಬ್ಬು ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ಬಾಕಿ ಪಾವತಿ ಮಾಡಿದ್ದನ್ನು ತೀರಿಸಲು ಕೇಂದ್ರ ಸರ್ಕಾರ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಕರ್ನಾಟಕ ಸೇರಿದಂತೆ ಕಬ್ಬು ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಸಕ್ಕರೆ ಕಾರ್ಖಾನೆಗಳು ರೈತರಿಗೆ ಬಾಕಿ ಪಾವತಿ ಮಾಡಿದ್ದನ್ನು ತೀರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ಬೆಳೆಗಾರರಿಗೆ ದೇಶದ ಸಕ್ಕರೆ ಕಾರ್ಖಾನೆಗಳು 21 ಸಾವಿರ ಕೋಟಿ ಬಾಕಿ ನೀಡುವ ನಿಟ್ಟಿನಲ್ಲಿ 6 ಸಾವಿರ ಕೋಟಿ ಬಡ್ಡಿ ರಹಿತ ಸಾಲ ನೀಡುವ ಪ್ರಸ್ತಾಪಕ್ಕೆ ಒಪ್ಪಿಗೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬುಧವಾರ ದೆಹಲಿಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಸಭೆಯ ಬಳಿಕ ಮಾತನಾಡಿದ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಈ ಮಾಹಿತಿ ನೀಡಿದ್ದಾರೆ. ಗಮನಾರ್ಹ ಅಂಶವೇನೆಂದರೆ ಜನಧನ ಯೋಜನೆಯಡಿ ರೈತರು ಹೊಂದಿರುವ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಕಾರ್ಖಾನೆಗಳು ನೀಡುವ ಮೊತ್ತ ಜಮಾ ಆಗಲಿದೆ. ಬಾಕಿ ಯಾರಿಗೆ ನೀಡಬೇಕು ಎಂಬ ರೈತರ ಪಟ್ಟಿಯನ್ನು ಆಯಾ ಸಕ್ಕರೆ ಕಾರ್ಖಾನೆಗಳೇ ಮಾಡಲಿವೆ ಎಂದು ಗಡ್ಕರಿ ತಿಳಿಸಿದ್ದಾರೆ. ಒಟ್ಟಾರೆಯಾಗಿ ಶೇ.50 ಮಂದಿಗೆ ಈ ತಿಂಗಳ ಒಳಗಾಗಿ ಕಬ್ಬಿನ ಬಾಕಿ ಪಾವತಿ ನೀಡಲು ಕೇಂದ್ರ ಗುರಿ ಹಾಕಿಕೊಂಡಿದೆ. ಇದರ ಜತೆಗೆ ಸಕ್ಕರೆ ಅಭಿವೃದ್ಧಿ ನಿಧಿ (ಎಸ್‍ಡಿಎ_ï) ಯ 600 ಕೋಟಿ ರುಪಾಯಿ ಬಡ್ಡಿಯನ್ನು ಕೂಡ ಕೇಂದ್ರವೇ ಭರಿಸಲಿದೆ. ಅದಕ್ಕಾಗಿ ಒಂದು ವರ್ಷದ ಹೆಚ್ಚುವರಿ ಅವಧಿಯನ್ನು ನೀಡಲೂ ಸಂಪುಟ ಸಭೆ ಒಪ್ಪಿಗೆ ನೀಡಿದೆ.

ಇದು 2 ನೇ ಬಾರಿ: ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ವೇಳೆ 6,600 ಕೋಟಿ ರು. ಸಾಲ ನೀಡುವ ಬಗ್ಗೆ ನಿರ್ಧಾರ ಕೈಗೊಂಡಿತ್ತು. ಇದರ ಜತೆಗೆ ಸಕ್ಕರೆ ಆಮದು ಮೇಲಿನ ಶುಲ್ಕ ಶೇ.40ರಷ್ಟು ಹೆಚ್ಚಿಸಲೂ ನಿರ್ಧಾರ ಕೈಗೊಳ್ಳಲಾಗಿದೆ.

ಎಂಸಿಎಫ್ ನಲ್ಲಿ ಯೂರಿಯಾ ಉತ್ಪಾದನೆಗೆ ಸಂಪುಟ ಅಸ್ತು
ಮಂಗಳೂರು ರಸಗೊಬ್ಬರ ಕಾರ್ಖಾನೆ (ಎಂಸಿಎಫ್) ಸೇರಿದಂತೆ ಮೂರು ಕಂಪನಿಗಳಲ್ಲಿ ನಾಫ್ತಾ ಆಧರಿತ ಯೂರಿಯಾ ಉತ್ಪಾದನೆಗೆ ಕೇಂದ್ರ ಸಂಪುಟ ಒಪ್ಪಿಗೆ ನೀಡಿದೆ. ಮದ್ರಾಸ್ ಫರ್ಟಿಲೈಸರ್ಸ್, ಎಸ್‍ಪಿಐಸಿ ಇತರ ಸಂಸ್ಥೆಗಳಾಗಿವೆ. ದಕ್ಷಿಣ ಭಾರತದ ರಾಜ್ಯಗಳಿಗೆ ಯೂರಿಯಾವನ್ನು ಅಡ್ಡಿ ಇಲ್ಲದೆ ಪೂರೈಸಲು ಈ ನಿರ್ಧಾರ ಕೈಗೊಳ್ಳಲಾಗಿದೆ. ಕರ್ನಾಟಕ, ತಮಿಳು ನಾಡು ಮತ್ತು ಕೇರಳಗಳಲ್ಲಿ ವಾರ್ಷಿಕವಾಗಿ 23 ಲಕ್ಷ ಟನ್ ಯೂರಿಯಾ ಬೇಕಾಗುತ್ತದೆ. ಈ ಮೂರು ಸಂಸ್ಥೆಗಳ ವಾರ್ಷಿಕ ಉತ್ಪಾದನಾ ಸಾಮಥ್ರ್ಯ 15 ಲಕ್ಷ ಟನ್ ಎಂದು ಸಭೆಯ ಬಳಿಕ ಕೇಂದ್ರ ಸಚಿವ ಅನಂತಕುಮಾರ್ ತಿಳಿಸಿದ್ದಾರೆ.

ರೈತರ ಪರವಾಗಿದ್ದೇವೆ ಎಂದು ಹೇಳಿಕೆ ನೀಡುತ್ತಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಸರ್ಕಾರವೇ ಕಬ್ಬಿಗೆ ನಿಗದಿ ಪಡಿಸಿದ ದರ ನೀಡಲು ಸಾಧ್ಯವಾಗುತ್ತಿಲ್ಲ. ಕಬ್ಬು ಪೂರೈಸಿದ ರೈತರಿಗೆ ನಿಗದಿತ ವೇಳೆಯಲ್ಲಿ ಕಬ್ಬಿನ ಬಿಲ್ ಪಾವತಿಯಾಗುತ್ತಿಲ್ಲ. ಸರ್ಕಾರ ಕಬ್ಬು ಬೆಳೆಗಾರರ ಬಾಕಿ ಬಿಲ್ ಪಾವತಿಸಲು ಕ್ರಮ ಕೈಗೊಳ್ಳಬೇಕು. ಯಾವ ಕಾರ್ಖಾನೆ ಎಷ್ಟು ಬಾಕಿ ನೀಡಬೇಕಿದೆ ಎಂಬುದನ್ನು ರೈತರು ಮಾಹಿತಿ ನೀಡಿದರೆ ಆಯಾ ಕಾರ್ಖಾನೆಗಳ ಜತೆಗೆ ನಾನೇ ಮಾತುಕತೆ ನಡೆಸುವೆ.
-ಸುರೇಶ ಅಂಗಡಿ, ಬೆಳಗಾವಿ ಸಂಸದ

ಎಂ.ಕೆ. ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಸೇರಿದಂತೆ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳು ಕಬ್ಬು ಪೂರೈಸಿದ ರೈತರಿಗೆ ಬಿಲ್ ನೀಡದೇ ಸತಾಯಿಸುತ್ತಿವೆ. ಕಬ್ಬಿನ ಬಾಕಿ ಬಿಲ್ ಬಾರದೇ ಇರುವುದರಿಂದ ರೈತ ಗುರುನಾಥ ಚಾಪಗಾಂವಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಬ್ಬು ಕಳಿಸಿ ನಾಲ್ಕು ತಿಂಗಳಾದರೂ ಬಿಲ್ ಪಾವತಿಸದ ಕಾರ್ಖಾನೆ ರೈತ ಆತ್ಮಹತ್ಯೆ ಮಾಡಿಕೊಂಡ ನಂತರ ಬಿಲ್ ಪಾವತಿಸಿದೆ.
-ಬಸನಗೌಡ ಸಿದ್ರಾಮನಿ, ರೈತ ಮುಖಂಡ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com