ನವದೆಹಲಿ: 2015ನೇ ಸಾಲಿನ ಅಖಿಲ ಭಾರತ ವೈದ್ಯಕೀಯ ಪೂರ್ವ ಪ್ರವೇಶ ಪರೀಕ್ಷೆ ನಡೆಸಲು ಹಾಗೂ ಫಲಿತಾಂಶ ಪ್ರಕಟಿಸಲು ಸಿಬಿಐಎಸ್ಇಗೆ ಸುಪ್ರೀಂ ಕೋರ್ಟ್ ಆಗಸ್ಟ್ 16ರವರೆಗೆ ಕಾಲಾವಕಾಶ ನೀಡಿದೆ.
ಮೇ 3ರಂದು ನಡೆದ ವೈದ್ಯಕೀಯ ಪೂರ್ವ ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಜೂನ್ 15ರಂದು ಪರೀಕ್ಷೆಯನ್ನು ರದ್ದುಗೊಳಿಸಿ, ನಾಲ್ಕು ವಾರಗಳಲ್ಲಿ ಮತ್ತೆ ಹೊಸದಾಗಿ ಪರೀಕ್ಷೆ ನಡೆಸುವಂತೆ ಸಿಬಿಎಸ್ಇಗೆ ಸೂಚಿಸಿತ್ತು. ಆದರೆ ನಾಲ್ಕು ವಾರಗಳಲ್ಲಿ ಪರೀಕ್ಷೆ ನಡೆಸಲು ಅಸಾಧ್ಯ ಎಂದಿದ್ದ ಸಿಬಿಎಸ್ಇ ಹೆಚ್ಚಿನ ಕಾಲಾವಕಾಶ ಕೋರಿ ಮೇಲ್ಮನವಿ ಸಲ್ಲಿಸಿತ್ತು.
ಇಂದು ಅರ್ಜಿಯ ವಿಚಾರಣೆ ನಡೆಸಿದ ಆರ್.ಕೆ.ಅಗರವಾಲ್ ನೇತೃತ್ವದ ಸುಪ್ರೀಂ ಪೀಠ, ಆಗಸ್ಟ್ 16ರವರೆಗೆ ಸಮಯ ನೀಡಿದೆ.
ಮೇ 3 ರಂದು ನಡೆದ ಅಖಿಲ ಭಾರತ ವೈದ್ಯಕೀಯ-ಪೂರ್ವ ಪ್ರವೇಶ ಪರೀಕ್ಷೆ (ಎಐಪಿಎಂಟಿ)ಯ ಪ್ರಶ್ನೆ ಪತ್ರಿಕೆಗಳು ಬಿಹಾರ, ಜಾರ್ಖಂಡ್, ರಾಜಸ್ಥಾನ, ಹರಿಯಾಣ ಸೇರಿದಂತೆ ಇನ್ನಿತರೆ ರಾಜ್ಯಗಳಲ್ಲಿ ಮೊಬೈಲ್ ಮೂಲಕ ಬಹಿರಂಗವಾಗಿದ್ದವು. ಪ್ರಕರಣದ ಅರ್ಜಿದಾರರಲ್ಲೊಬ್ಬರಾದ ಪ್ರಶಾಂತ್ ಭೂಷಣ್ ಫಲಾನುಭವಿಗಳನ್ನು ಕಂಡುಹಿಡಿಯುವುದು ಕಷ್ಟಕರವಾದ್ದರಿಂದ ಮರುಪರೀಕ್ಷೆ ನಡೆಸುವುದೇ ಒಳಿತು ಎಂದು ಸಲಹೆ ನೀಡಿದ್ದರು.
Advertisement