ಚಿಕ್ಕಬಳ್ಳಾಪುರ: ವಿಧಾನಸಭೆ ಉಪ ಸಭಾಪತಿ ಎನ್.ಎಚ್.ಶಿವಶಂಕರರೆಡ್ಡಿ ಅವರ ಮೇಲೆ ವ್ಯಕ್ತಿಯೊಬ್ಬ ಚಪ್ಪಲಿಯಿಂದ ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ತಾಲೂಕಿನ ವಿಧುರಾಶ್ವತ್ಥ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಗ್ರಾಮದಲ್ಲಿ ಕೃಷಿ ಇಲಾಖೆ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮ ಮುಗಿಸಿ ವೇದಿಕೆಯಿಂದ ಕೆಳಗಿಳಿಯುವಾಗ ವ್ಯಕ್ತಿಯೊಬ್ಬ ಹಠಾತ್ತನೆ ಚಪ್ಪಲಿಯಿಂದ ಹಲ್ಲೆ ನಡೆಸಲು ಮುಂದಾದರು. ಅದು ಗುರಿ ತಪ್ಪಿ ಅಂಗರಕ್ಷಕರ ಮೇಲೆ ಬಿತ್ತು ಎನ್ನಲಾಗಿದೆ.
ಹಲ್ಲೆ ನಡೆಸಲು ಮುಂದಾದ ವ್ಯಕ್ತಿಯನ್ನು ಹಾಲಗಾನಹಳ್ಳಿ ನಿವಾಸಿ ಜಯರಾಂ ರೆಡ್ಡಿ ಎಂದು ಗುರುತಿಸಲಾಗಿದೆ. ಅಂಗರಕ್ಷಕ ಅವರನ್ನು ಹಿಡಿದಿಟ್ಟಿಕೊಂಡಾಗ ನೆರೆದಿದ್ದ ಸಾರ್ವಜನಿಕರು ಆತನ ಮೇಲೆ ಹಲ್ಲೆ ನಡೆಸಿದರು. ಕೆಲವರು ಪೆಟ್ರೋಲ್ ಸುರಿಯಲೂ ಯತ್ನಿಸಿದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಅಂಗರಕ್ಷಕ ಅವರನ್ನು ಬಚಾವ್ ಮಾಡಿ ವಿಧುರಾಶ್ವತ್ಥ ಹೊರ ಪೋಲಿಸ್ ಠಾಣೆಗೆ ಒಪ್ಪಿಸಿದ್ದಾರೆ. ಅಲ್ಲಿಗೂ ತೆರಳಿದ ಸಾರ್ವಜನಿಕರು, ಆತನನ್ನು ನಮಗೆ ಒಪ್ಪಿಸಿ ಎಂದು ಪೋಲಿಸ್ ಠಾಣೆಯ ಮುಂದೆ ಕೂಗಾಡುತ್ತಿದ್ದರು.
ಉಪ ಸಭಾಪತಿಯ ಮೇಲೆ ಹಲ್ಲೆಗೆ ಯತ್ನಿಸಿದ ಜಯರಾಮರೆಡ್ಡಿ ಸಹ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಈತ ಮಾನಸಿಕ ರೋಗಿ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
Advertisement