ಮಣಿಪಾಲ ವಿವಿಗೆ 1,123 ಕೋಟಿ ದಂಡ

ಶೈಕ್ಷಣಿಕ ಉದ್ದೇಶಕ್ಕಾಗಿ ಕೊಟ್ಟ ಭೂಮಿಯನ್ನು ಇತರೆ ಉದ್ದೇಶಕ್ಕಾಗಿ ಬಳಸಿದ ಕಾರಣಕ್ಕಾಗಿ ರಾಜ್ಯ ಸರ್ಕಾರ ಮಣಿಪಾಲ ವಿಶ್ವವಿದ್ಯಾನಿಲಯಕ್ಕೆ...
ಮಣಿಪಾಲ ವಿವಿ
ಮಣಿಪಾಲ ವಿವಿ

ಉಡುಪಿ: ಶೈಕ್ಷಣಿಕ ಉದ್ದೇಶಕ್ಕಾಗಿ ಕೊಟ್ಟ ಭೂಮಿಯನ್ನು ಇತರೆ ಉದ್ದೇಶಕ್ಕಾಗಿ ಬಳಸಿದ ಕಾರಣಕ್ಕಾಗಿ ರಾಜ್ಯ ಸರ್ಕಾರ ಮಣಿಪಾಲ ವಿಶ್ವವಿದ್ಯಾನಿಲಯಕ್ಕೆ 1,123 ಕೋಟಿ ರುಪಾಯಿ ದಂಡ ವಿಧಿಸಿದೆ.

ಮಣಿಪಾಲ ವಿವಿ ಶೈಕ್ಷಣಿಕ ಉದ್ದೇಶಕ್ಕಾಗಿ ಸರ್ಕಾರ ನೀಡಿರುವ ಭೂಮಿಯನ್ನು ಬೇರೆ ಉದ್ದೇಶಕ್ಕಾಗಿ ಬಳಸಿದೆ. ಇದರಿಂದ ಭೂ ಮಂಜೂರಾತಿ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಕಂದಾಯ ಇಲಾಖೆ ನೀಡಿದ ವರದಿ ಅನ್ವಯ ಈ ಕ್ರಮ ಕೈಗೊಂಡಿದೆ. ಈ ಆರೋಪವನ್ನು ಅಲ್ಲಗಳೆಯುವುದಕ್ಕೆ ವಿವಿ ಬಳಿ ಸೂಕ್ತ ದಾಖಲೆಗಳಿದ್ದರೆ ಅವುಗಳನ್ನು ನೀಡಬಹುದು ಎಂದು ಹೇಳಿರುವ ಸರ್ಕಾರ, ಇದಕ್ಕೆ 30 ದಿನಗಳ ಗಡುವು ನೀಡಿದೆ.

ಮಣಿಪಾಲ ವಿವಿಗೆ 1953ರಿಂದ ಮೈಸೂರು ಪ್ರಾಂತ್ಯ ಭೂ ಮಂಜೂರಾತಿ ಕಾಯ್ದೆ ಮತ್ತು 1969ರಿಂದ ಕರ್ನಾಟಕ ಭೂ ಮಂಜೂರಾತಿ ಕಾಯ್ದೆಯನ್ವಯ ಇದುವರೆಗೆ ಒಟ್ಟು 269 ಎಕರೆ ಭೂಮಿಯನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ಸರ್ಕಾರ ಮಂಜೂರು ಮಾಡಿದೆ. ಅದರಲ್ಲಿ 102 ಎಕರೆಯನ್ನು ಮಣಿಪಾಲ ವಿವಿ ಅತಿಕ್ರಮಣ ಮಾಡಿಕೊಂಡ ಬಗ್ಗೆ ಜಿಲ್ಲಾಡಳಿತ ಸುಪ್ರೀಂ ಕೋರ್ಟ್‌ನಲ್ಲೂ ಪ್ರಕರಣ ದಾಖಲಿಸಿದ್ದರೂ ಅಲ್ಲಿ ಸೋತಿತ್ತು. ಉಳಿದ ಭೂಮಿಯಲ್ಲಿ ಕೇವಲ 50 ಎಕರೆ ಭೂಮಿ ಮಾತ್ರ ಶೈಕ್ಷಣಿಕ ಉದ್ದೇಶಕ್ಕೆ ಬಳಕೆಯಾಗಿದ್ದು, ಇನ್ನುಳಿದ 109 ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿರುವ ಬಹುಮಹಡಿ ಕಟ್ಟಡಗಳು ಪೂರ್ಣ ಅಥವಾ ಭಾಗಶಃವಾಗಿ ಶೈಕ್ಷಣಿಕ ಉದ್ದೇಶಕ್ಕೆ ಬಳಸದೆ ದುರ್ಬಳಕೆ ಮಾಡಲಾಗಿದೆ ಎಂದು ಕಂದಾಯ ಇಲಾಖೆ ವರದಿ ಹೇಳಿದೆ.

ಭೂ ಮಂಜುರಾತಿ ಕಾಯ್ದೆಯ ಪ್ರಕಾರ ಕಾಯ್ದೆ ಉಲ್ಲಂಘಿಸಿದರೆ ಭೂಮಿಯ ಬೆಲೆಯ 3 ಪಟ್ಟು ದಂಡ ವಿಧಿಸುವ ಅವಕಾಶ ಇರುವುದರಿಂದ ಈ 109 ಎಕರೆ ಭೂಮಿಯ ಬೆಲೆಯ ಮೂರು ಪಟ್ಟು ಅಂದರೆ 1,123 ಕೋಟಿ ರುಪಾಯಿ ದಂಡ ವಿಧಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಡಾ.ಆರ್.ವಿಶಾಲ್ ಅವರು ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮಣಿಪಾಲ ವಿವಿ ಕುಲಸಚಿವ ಡಾ.ಜೆ.ಕೆ.ಪ್ರಭು ಅವರು, ಮಣಿಪಾಲ ವಿವಿ 50 ವರ್ಷಗಳಿಂದ ಕಾರ್ಯಾಚರಿಸುತ್ತಿದ್ದು, ಸರ್ಕಾರ ನೀಡುವ ಭೂಮಿಯ ಒಂದಿಂಚನ್ನೂ ದುರುಪಯೋಗಪಡಿಸಿಕೊಂಡಿಲ್ಲ. ವಿವಿಯ ಎಲ್ಲ ಕಟ್ಟಡಗಳಿಗೆ ಸಕ್ಷಮ ಪ್ರಾಧಿಕಾರಗಳಿಂದ ಪರವಾನಗಿ, ಪೂರ್ಣತಾ ಪ್ರಮಾಣಪತ್ರ, ಬಳಕೆಯ ಪ್ರಮಾಣ ಪತ್ರ, ಡೋರ್ ನಂಬರ್‌ಗಳನ್ನು ಪಡೆಯಲಾಗಿದೆ. ಇಂಥದ್ದೇ ನೋಟಿಸ್‌ನ್ನು ಸರ್ಕಾರ 2000ದಲ್ಲಿಯೂ ನೀಡಿತ್ತು. ಆದರೆ, ಹೈಕೋರ್ಟ್ ವಿವಿವಾದ ಎತ್ತಿಹಿಡಿದಿದೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com