ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಮತ್ತು ಲಲಿತ್ ಮೋದಿ ವಿರುದ್ಧದ ಸಾಕ್ಷ್ಯ ಒದಗಿಸುವುದನ್ನು ಕಾಂಗ್ರೆಸ್ ಸತತ 2ನೇ ದಿನವೂ ಮುಂದುವರಿಸಿದೆ. ಈ ಇಬ್ಬರೂ ನಾಯಕರ ಕುಟುಂಬಗಳ ನಡುವೆ ಕ್ರಿಮಿನಲ್ ಸಂಬಂಧವಿದೆ ಎಂದು ಆರೋಪಿಸಿರುವ ಕಾಂಗ್ರೆಸ್, ಧೋಲ್ಪುರ ಅರಮನೆಗೆ ಸಂಬಂಧಿಸಿದ ಇನ್ನಷ್ಟು ಪುರಾವೆ ಬಹಿರಂಗಪಡಿಸಿದೆ. ಧೋಲ್ಪುರ ಅರಮನೆ ರಾಜಸ್ಥಾನ ಸರ್ಕಾರಕ್ಕೆ ಸೇರಿದ್ದು, ರಾಜೇ ಕುಟುಂಬಕ್ಕಲ್ಲ ಎನ್ನುವುದನ್ನು ತೋರಿಸುವ 1949ರ ದಾಖಲೆಗಳನ್ನು ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಅವರು ಮಂಗಳವಾರ ಮುಂದಿಟ್ಟಿದ್ದಾರೆ. ``ರಾಜೇ ಅವರ ಪರಿತ್ಯಕ್ತ ಪತಿ ಹೇಮಂತ್ ಸಿಂಗ್ ಅವರು ಪುತ್ರ ದುಶ್ಯಂತ್ ಹೆಸರಿಗೆ ಬರೆದ ಅರಮನೆಯದು'' ಎಂಬ ಬಿಜೆಪಿ ವಾದವನ್ನು ತಳ್ಳಿ ಹಾಕಿರುವ ಜೈರಾಮ್ 2007ರಲ್ಲಿ ಹೇಮಂತ್ ಹಾಗೂ ದುಶ್ಯಂತ್ ನಡುವೆ ಕೇವಲ ಚರ ಆಸ್ತಿಗೆ ಸಂಬಂಧಿಸಿ ಮಾತ್ರ ಒಪ್ಪಂದ ನಡೆದಿದ್ದು, ಅರಮನೆ ಯಾವತ್ತೂ ಸರ್ಕಾರಕ್ಕೇ ಸೇರಿದ್ದು. 1949ರಲ್ಲಿ ಅರಮನೆಯನ್ನು ಸ್ವಾಧೀನಪಡಿಸಿಕೊಂಡಿದ್ದ ಸರ್ಕಾರ, ಆಗಿನ ಧೋಲ್ಪುರ ಮಹಾರಾಜರಾಗಿದ್ದ ರಾಜೇ ಅವರ ತಾತನಿಗೆ ಅವರ ಜೀವಿತಾವಧಿವರೆಗೆ ಅಲ್ಲಿ ವಾಸಿಸಲು ಅನುಮತಿ ನೀಡಿತ್ತು ಎಂದು ಜೈರಾಮ್ ಆರೋಪಿಸಿದ್ದಾರೆ.