

ನವದೆಹಲಿ: ಲೋಕಸಭಾ ಕ್ಯಾಂಟೀನ್ ಗೆ ಸೋಮವಾರ ಅನಿರೀಕ್ಷಿತ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ ೨೯ ರುಪಾಯಿ ನೀಡಿ ಸರಳ ಶಾಖಾಹಾರ ಊಟವಾದ ಪಾಲಾಕ್ ಸಬ್ಜಿ, ರಾಜಮಾ, ರೈತಾ, ದಾಲ್ ರೋಟಿ ಮತ್ತು ಚಾವಲ್ ಸವಿದದ್ದಲ್ಲದೆ, ಅಲ್ಲಿನ ಸಲಹಾ ಪುಸ್ತಕದಲ್ಲಿ "ಅನ್ನದಾತ ಸುಖೀಭವೋ" (ಅಣ್ಣ ಉಣಿಸಿದವನು ಸುಖವಾಗಿರಲಿ) ಎಂದು ಬರೆದಿದ್ದಾರೆ.
ಸುಮಾರು ೧ ಘಂಟೆಗೆ ಕ್ಯಾಂಟಿನ್ ಒಳಗೆ ಬಂದ ನರೇಂದ್ರ ಮೋದಿ ಅವರನ್ನು ನೋಡಿ ಪುಳಕಗೊಂಡ ಕ್ಯಾಂಟಿನ್ ನಿರ್ವಾಹಕ ಬಿ ಎಲ್ ಪುರೋಹಿತ್ "೩-೪ ದಶಕಗಳಿಂದ ನಮ್ಮ ಕ್ಯಾಂಟೀನ್ ನಲ್ಲಿ ನಾನು ನೋಡಿರುವ ಅತಿ ಗಣ್ಯ ವ್ಯಕ್ತಿ ಇವರು. ಯಾವುದೇ ಪ್ರಧಾನಿಗೆ ಇಲ್ಲಿ ನಾವು ಬಡಿಸಿದ್ದು ನಮಗೆ ನೆನಪಿಲ್ಲ-ಸಚಿವರು ಕೂಡ ಇಲ್ಲಿಗೆ ಬರುವುದಿಲ್ಲ" ಎಂದಿರುವ ಪುರೋಹಿತ್, ಸಲಹೆ ಪುಸ್ತಕದಲ್ಲಿ ಪ್ರಧಾನಿ ಅವರ ಸಲಹೆಯನ್ನು ತೆಗೆದುಕೊಳ್ಳುವುದರಲ್ಲಿ ಯಶಸ್ವಿಯಾಗಿದ್ದಾರೆ.
ಶ್ರೀಮಂತರ ಪರವಾದ ಬಜೆಟ್ ನೀಡಿರುವುದಕ್ಕೆ ವಿಪಕ್ಷಗಳಿಂದ ತೀವ್ರ ವಿರೋಧಕ್ಕೆ ಒಳಗಾಗಿರುವ ಪ್ರಧಾನಿ ತಮ್ಮ ಶಿಷ್ಟತೆ ಮುರಿದು ಸಾಮಾನ್ಯ ಊಟ ಮಾಡಿರುವುದು ಅಚ್ಚರಿ ಮತ್ತು ಜಾಣ ನಡೆ ಎನ್ನಲಾಗಿದೆ.
ಬಾಟಲಿ ನೀರು ಬೇಡ ಎಂದ ಮೋದಿ ಅವರು ಸರಳ ಸಸ್ಯಾಹಾರಿ ಊಟದ ಮೊರೆ ಹೋಗಿದ್ದಾರೆ. ೧೦೦ ರುಪಾಯಿ ನೋಟು ನೀಡಿ ಚಿಲ್ಲರೆ ಹಿಂತೆಗೆದುಕೊಂಡು ಮರಳಿದರು ಎನ್ನಲಾಗಿದೆ. ಕೊನೆಯ ಬಾರಿ ಇದೇ ಮಟ್ಟದ ಗಣ್ಯ ವ್ಯಕ್ತಿ ಈ ಕ್ಯಾಂಟಿನ್ ಗೆ ಬಂದದ್ದು ದಿವಂಗತ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅಧಿಕಾರ ಕಳೆದುಕೊಂಡಿದ್ದಾಗ!
Watch Video Here