ಪಾಟ್ನಾ: ತಮ್ಮ ಸರ್ಕಾರ ಘೋಷಿಸಿದ್ದ ನಿರ್ಧಾರಗಳನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ರದ್ದು ಮಾಡಿರುವುದನ್ನು ವಿರೋಧಿಸಿ ಬಿಹಾರದ ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಮತ್ತು ತಮ್ಮ ಸಂಪುಟದಲ್ಲಿ ಸಚಿವರಾಗಿದ್ದ ಬೆಂಬಲಿಗರು ಗಾಂಧಿ ಮೈದಾನದಲ್ಲಿ ಧರಣಿ ನಡೆಸಿದ್ದಾರೆ.
ತಮ್ಮ ಸಂಪುಟದ ೩೪ ನಿರ್ಧಾರಗಳನ್ನು ನಿತೀಶ್ ಸರ್ಕಾರ ವಜಾ ಮಾಡಿರುವುದನ್ನು ವಿರೋಧಿಸಿ ಕೆಲವು ಜನತಾ ದಳ (ಸಂಯುಕ್ತ) ಶಾಸಕರೊಂದಿಗೆ, ಮಾಂಝಿ ಮತ್ತು ತಮ್ಮ ಸಂಪುಟದಲ್ಲಿ ಸಚಿವಾರಾಗಿದ್ದ ಕೆಲವರು ಮಹಾತ್ಮ ಗಾಂಧಿ ಪ್ರತಿಮೆಯ ಅಡಿ ಉಪವಾಸ ಧರಣಿ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಒಂದು ಕಾಲದಲ್ಲಿ ತಮ್ಮ ಗುರುಗಳಾಗಿದ್ದ ನಿತೀಶ್ ಕುಮಾರ್ ಮೇಲೆ ವಾಗ್ದಾಳಿ ನಡೆಸಿದ ಮಾಂಝಿ, ತಮ್ಮ ಸಂಪುಟದ ನಿರ್ಧಾರಗಳನ್ನು ರದ್ದು ಪಡಿಸಿರುವುದು ಕಾನೂನುಬಾಹಿರ ಎಂದು ದೂರಿದ್ದಾರೆ.
ಸರ್ಕಾರದ ಬೊಕ್ಕಸದಲ್ಲಿ ಹಣದ ಕೊರತೆಯಿದೆ ಎಂಬ ಕಾರಣವನ್ನು ತಳ್ಳಿಹಾಕಿರುವ ಅವರು ನಿತೀಶ್ ಕುಮಾರ್ ಅಭಿವೃದ್ಧಿಗೆ ಬದಲಾಗಿ ಆಢಂಬರ ಮತ್ತು ಪ್ರದರ್ಶನಕ್ಕೆ ಹಣವನ್ನು ವಿನಯೋಗಿಸುತ್ತಿದ್ದಾರೆ ಎಂದು ದೂರಿದ್ದಾರೆ.
ನಾವು ಬಡತನದ ವಿರುದ್ಧ ಹೋರಾಡುತ್ತಿರುವಾಗ, ಅಂತರಾಷ್ಟ್ರೀಯ ಸಂಗ್ರಹಾಲಯ, ಸಮಾವೇಶ ಆಲಯ, ವಿಧಾನ ಸಭಾ ಸಮಾವೇಶಕ್ಕೆ ಹೊಸ ಕಟ್ಟಡ, ಶಾಸಕರಿಗೆ ಹೊಸ ವಸತಿ ಸೌಲಭ್ಯ ಇವುಗಳಿಗೆ ಹಣ ವ್ಯಯಿಸುವ ಔಚಿತ್ಯ ಏನು ಎಂದು ಪ್ರಶ್ನಿಸಿದ್ದಾರೆ.
Advertisement