ಅರವಿಂದ್ ಕೇಜ್ರಿವಾಲ್ ಗುಣಮುಖ; ಇಂದು ಸಂಜೆ ದೆಹಲಿಗೆ

ಬೆಂಗಳೂರಿನಲ್ಲಿ ೧೨ ದಿನಗಳ ನ್ಯಾಚುರೋಪತಿ ಚಿಕಿತ್ಸೆ ಪಡೆದ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುಣಮುಖರಾಗಿ ದೆಹಲಿಯತ್ತ ಮುಖ
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

ಬೆಂಗಳೂರು: ಬೆಂಗಳೂರಿನಲ್ಲಿ ೧೨ ದಿನಗಳ ನ್ಯಾಚುರೋಪತಿ ಚಿಕಿತ್ಸೆ ಪಡೆದ ನಂತರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗುಣಮುಖರಾಗಿ ದೆಹಲಿಯತ್ತ ಮುಖ ಮಾಡಿದ್ದಾರೆ. ಕೆಮ್ಮಿನ ತೊಂದರೆಯಿಂದ ಸಂಪೂರ್ಣ ಪರಿಹಾರ ಸಿಕ್ಕಿದೆ ಎಂದಿರುವ ಕೇಜ್ರಿವಾಲ್, ಸಕ್ಕರೆ ಅಂಶ ಕೂಡ ನಿಯಂತ್ರಣದಲ್ಲಿದ್ದು ಕೆಲಸಕ್ಕೆ ಹಿಂದಿರುಗಲು ಉತ್ಸುಕನಾಗಿದ್ದೇನೆ ಎಂದು ತಿಳಿಸಿದ್ದಾರೆ. ಇಂದು ಸಂಜೆ ಅವರು ದೆಹಲಿಗೆ ತೆರಳುವ ಸಾಧ್ಯತೆ ಇದೆ.

ಈ ಚಿಕಿತ್ಸೆಯ ೧೨ ದಿನಗಳ ಅವಧಿಯಲ್ಲಿ ಆರೋಗ್ಯ, ಸಾರ್ವಜನಿಕ ವಿತರಣಾ ಯೋಜನೆ ಮತ್ತು ಶಾಲೆಗಳಲ್ಲಿ ಮಧ್ಯಾಹ್ನದ ಊಟದ ಬಗ್ಗೆ ಚಿಂತಿಸಲು ಸಮಯ ಸಿಕ್ಕಿತು ಎಂದಿದ್ದಾರೆ.

"ಕೆಮ್ಮು ಹೋಯಿತು. ಸಕ್ಕರೆ ನಿಯಂತ್ರಣದಲ್ಲಿದೆ. ಆರೋಗ್ಯ ಮತ್ತು ಉಲ್ಲಸಿತ ಎಂದೆನಿಸುತ್ತಿದೆ. ಕೆಲಸಕ್ಕೆ ಹಿಂದಿರುಗಲು ಉತ್ಸುಕನಾಗಿದ್ದೇನೆ. ಜಿಂದಾಲ್ ಸಂಸ್ಥೆಗೆ ಅಭಾರಿ. ಅಲ್ಲಿನ ವೈದ್ಯರಿಗೂ ಸಿಬ್ಬಂದಿಗಳಿಗೂ. ಇಂತಹ ಅದ್ಭುತ ಸಂಸ್ಥೆ ಪ್ರಾರಂಭಿಸಿದ ಮತ್ತು ಅದನ್ನು ಚೆನ್ನಾಗಿ ನಡೆಸಿಕೊಂಡು ಹೋಗುತ್ತಿರುವ ಸೀತಾರಾಮ್ ಅವರಿಗೆ ಅಭಿನಂದನೆಗಳು" ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ. ಇಂತಹ ಸಂಸ್ಥೆಗಳು ರಾಷ್ಟ್ರದಾದ್ಯಂತ ಸ್ಥಾಪನೆಯಾಗಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಸ್ಕಾನ್ ನಡೆಸುವ ಬಿಸಿಯೂಟ ಯೋಜನೆಯನ್ನು ನೋಡುವ ಅವಕಾಶ ಸಿಕ್ಕಿತು ಮತ್ತು ಇದರಿಂದ ಸಂತಸ ಆಯಿತು ಎಂದಿರುವ ಕೇಜ್ರಿವಾಲ್ "ಕಳೆದ ೧೨ ದಿನಗಳಲ್ಲಿ ದೆಹಲಿಯಲ್ಲಿ ಏನೇನು ಬದಲಾವಣೆ ತರಬಹುದು ಎಂಬುದರ ಮೇಲೆ ಚಿಂತನೆ ನಡೆಸಿದೆ. ಅದರಲ್ಲೂ ಶಿಕ್ಷಣ ಮತ್ತು ಸಾರ್ವಜನಿಕ ವಿತರಣಾ ಯೋಜನೆಗಳ ಮೇಲೆ ಚಿಂತಿಸಿ, ಉಪಮುಖ್ಯಮಂತ್ರಿ ಮನೀಷ್ ಸಿಸೋದಿಯಾ ಜೊತೆ ಚರ್ಚಿಸಿ ಕೆಲವು ಪ್ರಸ್ತಾವನೆಗಳನ್ನು ಕೂಡ ಮಾಡಿದ್ದೇನೆ" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com