ಪ್ರಕರಣ ಸಿಬಿಐಗೆ ಒಪ್ಪಿಸದಿದ್ದರೆ ವಿಧಾನಸೌಧ ಎದುರೇ ಆತ್ಮಹತ್ಯೆ: ರವಿ ಪೋಷಕರ ಎಚ್ಚರಿಕೆ

ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಒತ್ತಡ ಮತ್ತಷ್ಟು ಹೆಚ್ಚುತ್ತಿದ್ದು, ಇದೀಗ ರವಿ...
ಡಿ.ಕೆ.ರವಿ, ಪೋಷಕರು
ಡಿ.ಕೆ.ರವಿ, ಪೋಷಕರು

ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ನಿಗೂಢ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂಬ ಒತ್ತಡ ಮತ್ತಷ್ಟು ಹೆಚ್ಚುತ್ತಿದ್ದು, ಇದೀಗ ರವಿ ಅವರ ಪೋಷಕರು ಸಿಬಿಐ ತನಿಖೆಗೆ ಒತ್ತಾಯಿಸಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ.

ವಿಧಾನಸೌಧದ ಪಶ್ಚಿಮ ದ್ವಾರದಲ್ಲಿರುವ ಕೆಂಗಲ್ ಹನುಮಂತಯ್ಯ ಪ್ರತಿಮೆ ಬಳಿ ರವಿ ಅವರ ತಂದೆ ಕರಿಯಪ್ಪ, ತಾಯಿ ಗೌರಮ್ಮ ಹಾಗೂ ಸಹೋದರ ರಮೇಶ್ ಸೇರಿದಂತೆ ಹಲವು ಸಂಬಂಧಿಕರು ಪ್ರತಿಭಟನೆ ಮಾಡುತ್ತಿದ್ದು, ಸರ್ಕಾರ ಕೂಡಲೇ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ವೇಳೆ ಮಾಧ್ಯಮಕ್ಕೆ ಮಾತನಾಡಿದ ರವಿ ಅವರ ತಂದೆ ಕರಿಯಪ್ಪ, ಪ್ರಕರಣವನ್ನು ಸರ್ಕಾರ ಸಿಬಿಐ ತನಿಖೆಗೆ ಒಪ್ಪಿಸದಿದ್ದರೆ ತಾನು ವಿಧಾಸೌಧದ ಮುಂದೆಯೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಸಿದ್ದಾರೆ. ತಾಯಿ ಗೌರಮ್ಮ ಸಹ ಇದೇ ಮಾತನ್ನು ಹೇಳಿದ್ದು, ರವಿ ನನಗೊಬ್ಬನಿಗೆ ಮಗನಲ್ಲ.ಅವನು ದೇಶದ ಮಗ.ಅವನು ಆತ್ಮಹತ್ಯೆ ಮಾಡಿಕೊಳ್ಳುವ ಹೇಡಿಯಲ್ಲ, ಅವನನ್ನು ಕೊಲೆ ಮಾಡಲಾಗಿದೆ. ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿ ನಮಗೆ ನ್ಯಾಯ ಒದಗಿಸಬೇಕು ,ಇಲ್ಲವಾದಲ್ಲಿ ನಾವೆಲ್ಲರೂ ಇಲ್ಲೆ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ ಎಂದು ಕಣ್ಣೀರಿಟ್ಟರು.

ಈ ಮಧ್ಯೆ, ಪ್ರತಿಭಟನಾ ನಿರತ ರವಿ ಪೋಷಕರನ್ನು ಮುಖ್ಯಮಂತ್ರಿಗಳ ಕಚೇರಿ ಮಾತುಕತೆಗೆ ಆಹ್ವಾನ ನೀಡಿದ್ದು, ಆ ಆಹ್ವಾನವನ್ನು ಪೋಷಕರು ತಿರಸ್ಕರಿಸಿದ್ದಾರೆ. ಅಲ್ಲದೆ ತಮ್ಮ ಮಗನ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವವರೆಗೆ ತಾವು ಯಾರೊಂದಿಗೂ ಮಾತುಕತೆ ನಡೆಸುವುದಿಲ್ಲ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com