ನವದೆಹಲಿ: ರಾಷ್ಟ್ರರಾಜಧಾನಿ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಆಮ್ ಆದ್ಮಿ ಪಕ್ಷ, ಇದೀಗ ಬೆಂಗಳೂರು ಹಾಗೂ ಮುಂಬೈ ಮಹಾನಗರ ಪಾಲಿಕೆಗಳ ಚುನಾವಣೆಯ ಮೇಲೆ ಕಣ್ಣಿಟ್ಟಿದೆ.
'ಬೆಂಗಳೂರು ಮತ್ತು ಮುಂಬೈ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ' ಎಂದು ದೆಹಲಿ ಮೂಲದ ಆಪ್ ನಾಯಕರೊಬ್ಬರು ತಿಳಿಸಿದ್ದಾರೆ. ಅಲ್ಲದೆ ಈ ಕುರಿತಂತೆ ಅಲ್ಲಿನ ಪಕ್ಷದ ಘಟಕಗಳಿಂದ ಉತ್ತರ ಪ್ರತಿಕ್ರಿಯೆ ಬಂದಿದೆ ಎಂದು ಹೇಳಿದ್ದಾರೆ.
ಪಕ್ಷ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಸ್ಪರ್ಧಿಸಿದರೆ ಮತಗಟ್ಟೆಗಳ ಜವಾಬ್ದಾರಿ ನಿರ್ವಹಿಸುವಷ್ಟು ಕಾರ್ಯಕರ್ತರು ಇದ್ದಾರೆಯೇ ಎಂಬುದು ಸೇರಿದಂತೆ ಹಲವು ವಿಷಯಗಳ ಕುರಿತು ಪರಿಶೀಲನೆ ನಡೆಸುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಮುಂದಿನ ಎರಡು ತಿಂಗಳಲ್ಲಿ ಮತಗಟ್ಟೆ ಮಟ್ಟದಲ್ಲಿ ಕಾರ್ಯನಿರ್ವಹಿಸಲು ಬೇಕಾಗುವ ಕಾರ್ಯಕರ್ತರನ್ನು ಒಗ್ಗೂಡಿಸುತ್ತಿದ್ದೇವೆ. ಮುಂಬೈನ ಪ್ರತಿ ವಾರ್ಡ್ ನಲ್ಲೂ 40 ಮತಗಟ್ಟೆಗಳಿರುತ್ತವೆ. ನಮಗೆ ಕನಿಷ್ಠ 20 ಸ್ವಯಂ ಸೇವಕರು ಬೇಕು. ನಗರದಲ್ಲಿ ಒಟ್ಟು 9 ಸಾವಿರ ಮತಗಟ್ಟೆಗಳಿವೆ. ನಮ್ಮ ಗುರಿ 6 ಸಾವಿರ ಮತಗಟ್ಟೆಯಾಗಿದ್ದು, ಅಷ್ಟು ಸ್ವಯಂಸೇವಕರ ಅಗತ್ಯವಿದೆ ಎಂದು ವಿವರಿಸಿದ್ದಾರೆ.
Advertisement