ನವದೆಹಲಿ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ರಾಜಿನಾಮೆಗೆ ಆಗ್ರಹಿಸಿ ರಾಜ್ಯಸಭೆಯಲ್ಲಿ ಪ್ರತಿಭಟನೆ ಮಂಗಳವಾರ ಕೂಡ ಮುಂದುವರೆದಿದ್ದು ವಿರೋಧ ಪಕ್ಷದ ಸಂಸದರು ಕಲಾಪಕ್ಕೆ ಅಡ್ಡಿಪಡಿಸಿದ್ದಾರೆ.
ಕೆಲವು ಕಾಯ್ದೆಗಳು ಮಂಜೂರಾಗದಂತೆ ತಡೆಯಲು ಕಾಂಗ್ರೆಸ್ ಕಲಾಪಕ್ಕೆ ಅಡ್ಡಿ ಪಡಿಸುತ್ತಿದೆ ಎಂದು ರಾಜ್ಯಸಭೆಯ ಅಧ್ಯಕ್ಷ ಅರುಣ್ ಜೇಟ್ಲಿ ದೂರಿದ್ದಾರೆ.
'ಪುರ್ತಿ' ಸಂಸ್ಥೆಯಾಗಲಿ ಅಥಾ ತಾವಾಗಲೀ ಹಣಕಾಸು ವಿಷಯಗಳಲ್ಲಿ ಯಾವುದೇ ತಪ್ಪೆಸಗಿಲ್ಲ ಎಂದು ನಿತಿನ್ ಗಡ್ಕರಿ ನೆನ್ನೆ ಹೇಳಿದ್ದರು.
ಇಂದು ರಾಜ್ಯಸಭೆ ಕಲಾಪ ಪ್ರಾರಂಭವಾದಾಕ್ಷಣ ರಾಜ್ಯಸಭೆಯ ವಿರೋಧಪಕ್ಷದ ಅಧ್ಯಕ್ಷ ಗುಲಾಂ ನಭಿ ಆಜಾದ್ ಅವರು ಸೋಮವಾರ ಗಡ್ಕರಿ ನೀಡಿದ ಉತ್ತರ ತೃಪ್ತಿದಾಯಕವಾಗಿಲ್ಲ ಎಂದರು.
ಕಾಂಗ್ರೆಸ್ ನ ಪ್ರಮೋದ್ ತಿವಾರಿ ಈಗಾಗಲೇ ನೋಟಿಸ್ ಸಲ್ಲಿಸಿದ್ದು, ರಾಜ್ಯಸಭೆಯ ಇತರ ಕಲಾಪಗಳನ್ನು ರದ್ದುಪಡಿಸಿ ಈ ವಿಷಯದ ಚರ್ಚೆಯನ್ನು ಕೈಗೆತ್ತಿಕೊಳ್ಳಬೇಕು ಎಂದು ಆಜಾದ್ ಆಗ್ರಹಿಸಿದ್ದಾರೆ.
"ಈಗ ಸಾರ್ವಜನಿಕ ಲೆಕ್ಕಪತ್ರಗಳ ಪರಿಶೀಲನಾ ಸಮಿತಿ ಸಿ ಎ ಜಿ ವರದಿಯನ್ನು ಚರ್ಚಿಸಲಿದೆ. ನೆನ್ನೆ ಸಚಿವರು ಇಲ್ಲಿಗೆ ಬಂದಿದ್ದಾಗ ನೀವು ಸ್ಪಷ್ಟನೆ ಕೇಳಲಿಲ್ಲವೇಕೆ" ಎಂದು ಜೇಟ್ಲಿ ಪ್ರಶ್ನಿಸಿದ್ದಾರೆ.
"ಇದು ಅಂತಹ ಮಹತ್ವದ ವಿಷಯವೇನಲ್ಲ.... ನೀವು ಕಲಾಪಕ್ಕೆ ಅಡ್ಡಿಪಡಿಸುತ್ತಿರುವುದು ಏಕೆಂದರೆ ಕೆಲವು ಪ್ರಮುಖ ಕಾಯ್ದೆಗಳನ್ನು ಇಲ್ಲಿ ಮಂಜೂರು ಮಾಡುವುದು ನಿಮಗೆ ಇಷ್ಟವಿಲ್ಲ" ಎಂದು ಜೇಟ್ಲಿ ದೂರಿದ್ದಾರೆ.
ಇದು ವಿರೋಧ ಪಕ್ಷ ಸದಸ್ಯರ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿದ್ದರಿಂದ, ಕಲಾಪವನ್ನು ಮೊದಲಿಗೆ ೧೧:೩೦ ರವರೆಗೆ ಮುಂದೂಡಿ ನಂತರ ಮಧ್ಯಾಹ್ನ ೧೨ ರವರೆಗೆ ಮುಂದೂಡಲಾಯಿತು.
Advertisement