ನವದೆಹಲಿ: ಶಕುಂತಲಾ ಗ್ಯಾಮ್ಲಿನ್ ಅವರನ್ನು ದೆಹಲಿ ಮುಖ್ಯಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವ ವಿಚಾರದಲ್ಲಿ ತಗಾದೆ ತೆಗೆದಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಮುಖ್ಯಕಾರ್ಯದರ್ಶಿ ನೇಮಕದಲ್ಲಿ ಅನಾವಶ್ಯಕವಾಗಿ ವಿವಾದ ಉಂಟುಮಾಡುತ್ತಿರುವ ಅರವಿಂದ್ ಕೇಜ್ರಿವಾಲ್ ಓರ್ವ ನಕ್ಸಲೈಟ್ ಎಂದಿದ್ದು, ಚುನಾವಣೆಗೂ ಮುನ್ನ ದೆಹಲಿ ಜನತೆಗೆ ನೀಡಿದ್ದ ಭರವಸೆಗಳನ್ನು ಈಡೇರಿಸಲು ಕೇಜ್ರಿವಾಲ್ ಗೆ ಆಸಕ್ತಿ ಇಲ್ಲ ಎಂದು ಅವರು ಆರೋಪಿಸಿದ್ದಾರೆ.
ಭರವಸೆ ಈಡೇರಿಸಲು ಸಾಧ್ಯವಾಗದ ಕಾರಣ ಕೇಜ್ರಿವಾಲ್ ಅನವಶ್ಯಕ ವಿವಾದಗಳನ್ನು ಸೃಷ್ಟಿಸಿ, ಜನತೆಯ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ. ಕೇಜ್ರಿವಾಲ್ ಮೂತಃ ಓರ್ವ ನಕ್ಸಲೈಟಾಗಿದ್ದು ಅವರಿಗೆ ಆಡಳಿತ ನಡೆಸುವುದರಲ್ಲಿ ಆಸಕ್ತಿ ಇಲ್ಲವೆಂದು ಸುಬ್ರಮಣಿಯನ್ ಸ್ವಾಮಿ ಲೇವಡಿ ಮಾಡಿದ್ದಾರೆ.
ಉಚಿತ ವೈಫೈ ನೀಡುವ ಸಣ್ಣ ಭರವಸೆಯನ್ನೂ ಕೇರ್ಜಿವಾಲ್ ರಿಂದ ಈಡೇರಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ತಮ್ಮ ವಿರುದ್ಧ ಕೇಳಿಬರುವ ಆರೋಪಗಳಿಂದ ಕಳಚಿಕೊಳ್ಳಲು ಕೇಜ್ರಿವಾಲ್ ಅನಗತ್ಯ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಪತ್ರಕರ್ತರಿಗೆ ಸುಬ್ರಮಣಿಯನ್ ಸ್ವಾಮಿ ತಿಳಿಸಿದ್ದಾರೆ.
ಇದಕ್ಕೂ ಮುನ್ನ, ಫೆಬ್ರವರಿಯಲ್ಲಿ ಕೇಜ್ರಿವಾಲ್ ಅವರನ್ನು ನಕ್ಸಲೈಟ್ ಎಂದು ಬ್ರಾಂಡ್ ಮಾಡಿದ್ದ ಸುಬ್ರಮಣಿಯನ್ ಸ್ವಾಮಿ, ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದರೂ ಅರವಿಂದ್ ಕೇಜ್ರಿವಾಲ್ ಒಂದು ವರ್ಷಕ್ಕಿಂತ ಹೆಚ್ಚು ಆಡಳಿತ ನಡೆಸುವುದಿಲ್ಲ ಎಂದು ಭವಿಷ್ಯ ನುಡಿದಿದ್ದರು.
Advertisement