ಮುಂಬೈ: ಛತ್ರಪತಿ ಅಂತರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಕಳೆದ ವಾರ ಗುರುತಿಲ್ಲದ ಕೆಲವು ವಸ್ತುಗಳು ಹಾರುತ್ತಿದ್ದ ಹಿನ್ನಲೆಯಲ್ಲಿ ಅವುಗಳು ಜಾಹಿರಾತಿಗಾಗಿ ಬಳಸಿದ್ದ ಹೀಲಿಯಮ್ ಬಲೂನುಗಳು ಎಂದು ತಿಳಿದುಬಂದಿದ್ದು ಈ ವಿಷಯದಲ್ಲಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಮಂಗಳವಾರ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
"ನಾವು ಕುನಾಲ್ ಷಾ ಮತ್ತು ನೀಲೇಶ್ ಶ್ರೀಮಂಕರ್ ಎಂದು ಗುರುತಿಸಲಾಗಿರುವ ಇಬ್ಬರನ್ನು ಬಂಧಿಸಿದ್ದೇವೆ ಮತ್ತು ಇಂದು ಅಂಧೇರಿ ಕೋರ್ಟ್ ನಲ್ಲಿ ಅವರನ್ನು ಹಾಜರುಪಡಿಸಲಾಗುವುದು. ಇದು ಸಣ್ಣ ಅಪರಾಧವಾಗಿರುವುದರಿಂದ ಅವರನ್ನು ಜಾಮೀನಿನಿನ ಮೇಲೆ ಬಿಡುಗಡೆ ಮಾಡಲಾಗುವುದು" ಎಂದು ಪೊಲೀಸ್ ಸಹಾಯಕ ಮಹಾ ನಿರ್ದೇಶಕ ದೆವೇನ್ ಭಾರತಿ ತಿಳಿಸಿದ್ದಾರೆ.
ಕಾರ್ಯಕ್ರಮ ನಿರ್ವಹಣಾ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಇವರಿಬ್ಬರು ಮುಂಬೈ ವಿಮಾನನಿಲ್ದಾಣದ ಆಸುಪಾಸಿನಲ್ಲಿ ಶನಿವಾರ ಸಂಜೆ ನಾಲ್ಕರಿಂದ ಐದು ಹೀಲಿಯಮ್ ಬಲೂನುಗಳನ್ನು ಹಾರಿಸಿದ್ದು ಭದ್ರತಾ ಭೀತಿಯನ್ನು ಸೃಷ್ಟಿಸಿತ್ತು.
"ಉಪೇಕ್ಷೆ ಮಾಡಿರುವುದಕ್ಕೆ ಅವರ ಮೇಲೆ ಪ್ರಕರಣ ದಾಖಲು ಮಾಡಿದ್ದೇವೆ. ಅತಿ ಹೆಚ್ಚಿನ ಭದ್ರತಾ ವಲಯದಲ್ಲಿ ಬಲೂನುಗಳನ್ನು ಹಾರಿಸಲು ಅವರು ಪರವಾನಗಿ ಪಡೆದಿದ್ದಾರೆಯೇ ಎಂಬುದನ್ನು ಕೂಡ ಪರಿಶೀಲಿಸುತ್ತಿದ್ದೇವೆ" ಎಂದು ಕೂಡ ತಿಳಿಸಿದ್ದಾರೆ.
Advertisement