ನವದೆಹಲಿ: ದೇಶದಾದ್ಯಂತ ಹಲವಾರು ಮಹಿಳೆಯರಿಗೆ ಹಿನ್ನಡೆಯಾಗಬಲ್ಲ ತೀರ್ಪಿನಲ್ಲಿ, ೨೦೦೫ ರಲ್ಲಿ ಜಾರಿಯಾದ ಹಿಂದು ಉತ್ತರಾಧಿಕಾರ ಕಾಯ್ದೆ ತಿದ್ದುಪಡಿಗಿಂತಲೂ ಮುಂಚಿತವಾಗಿ ತಂದೆ ಮೃತಪಟ್ಟಿದ್ದರೆ, ಹೆಣ್ಣು ಮಕ್ಕಳಿಗೆ ಪಿತ್ರಾರ್ಜಿತ ಆಸ್ತಿ ದೊರಕುವ ಪ್ರಶ್ನೆಯೇ ಇಲ್ಲ ಎಂದು ಸುಪ್ರೀಮ್ ಕೋರ್ಟ್ ತಿಳಿಸಿದೆ.
೨೦೦೫ರಲ್ಲಿ ತಿದ್ದುಪಡಿಯಾದ ಹಿಂದು ಉತ್ತರಾಧಿಕಾರ ಕಾಯ್ದೆ ಹಿಂದಿನ ವ್ಯಾಜ್ಯಗಳಿಗೆ ಬಳಕೆಯಾಗುವುದಿಲ್ಲ. ಹಣ್ಣು ಮಕ್ಕಳು ಪಿತ್ರಾರ್ಜಿತ ಆಸ್ತಿ ಪಡೆಯಲು ಅವರ ತಂದೆ ೯ನೆ ಸೆಪ್ಟಂಬರ್ ೨೦೦೫ ರ ನಂತರ ಬದುಕಿರಬೇಕು ಎಂದು ಕೋರ್ಟ್ ತಿಳಿಸಿದೆ.
ಅನಿಲ್ ಆರ್ ದಾವೆ ಮತ್ತು ಆದರ್ಶ್ ಕೆ ಗೋಯಲ್ ಇವರುಗಳನ್ನು ಒಳಗೊಂಡ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.
ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಸಿಗುವಷ್ಟೇ ಪ್ರಮಾಣದಲ್ಲಿ ಹೆಣ್ಣು ಮಕ್ಕಳಿಗೂ ಹಂಚಿಕೆಯಾಗಬೇಕು ಎಂದು ಹಿಂದು ಉತ್ತರಾಧಿಕಾರ ಕಾಯ್ದೆಯಲ್ಲಿ ೯ ನೆ ಸೆಪ್ಟಂಬರ್ ೨೦೦೫ ರಲ್ಲಿ ತಿದ್ದುಪಡಿ ತರಲಾಗಿತ್ತು.
ಈ ಹಿಂದೆ ಕೂಡು ಹಿಂದು ಕುಟುಂಬದಿಂದ ಮಹಿಳೆ ಜೀವನ ನಿರ್ವಹಣೆಯನ್ನಷ್ಟೇ ಕೇಳಬಹುದಿತ್ತು. ಮತ್ತು ಈ ಕಾಯ್ದೆಯನ್ನು ಪರಿಚಯಿಸಿದ ಡಿಸೆಂಬರ್ ೨೦ ೨೦೦೪ ಕ್ಕೂ ಮುಂಚಿತವಾಗಿ ಆಸ್ತಿ ಹಂಚಿಕೆಯಾಗಿದ್ದರೆ ಹೆಣ್ಣು ಮಕ್ಕಳಿಗೆ ಪಾಲು ಕೇಳುವ ಅವಕಾಶವಿರಲಿಲ್ಲ. ಈಗ ಸುಪ್ರೀಮ್ ಕೋರ್ಟ್ ಮತ್ತೊಂದು ನಿರ್ಬಂಧವನ್ನು ಹೇರಿದೆ.
Advertisement