ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ಆಡಳಿತರೂಢ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳಲು ಹೋಗಿ ಮುಖಭಂಗ ಅನುಭವಿಸಿದ ಜೆಡಿಎಸ್ ನಾಯಕರು ಇದೀಗ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಕ್ಷಮೆಯಾಚಿಸಿದ್ದಾರೆ.
ಕಾಂಗ್ರೆಸ್ ಜೊತೆ ಮೈತ್ರಿ ಮಾತುಕತೆ ಆರಂಭಿಸಿದ್ದ ಜೆಡಿಎಸ್ ಶಾಸಕರಾದ ಚೆಲುವರಾಯಸ್ವಾಮಿ, ಜಮೀರ್ ಅಹಮ್ಮದ್ ಖಾನ್ ಹಾಗೂ ಅಖಂಡ್ ಶ್ರೀನಿವಾಸ್ ಅವರು ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕ್ಷಮೆಯಾಚಿಸಿದರು.
ಸಿಎಂ ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಮೀರ್ ಅಹಮ್ಮದ್ ಖಾನ್, ಕಾಂಗ್ರೆಸ್ ಜೊತೆ ಮೈತ್ರಿ ವಿಚಾರ ಮುಗಿದ ಅಧ್ಯಾಯ. ನಾವು ನಮ್ಮ ಕ್ಷೇತ್ರದ ಬಗ್ಗೆ ಚರ್ಚಿಸಲು ಸಿಎಂ ಭೇಟಿ ಮಾಡಿದ್ದೇವು. ಈ ವೇಳೆ ಸಿಎಂ ಸಹ ಮೈತ್ರಿ ವಿಚಾರ ಪ್ರಸ್ತಾಪಿಸಲಿಲ್ಲ ಎಂದರು.
ಮೈತ್ರಿ ಕುರಿತು ಕಾಂಗ್ರೆಸ್ ಬಳಿ ಚರ್ಚಿಸುವಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರೇ ಸೂಚಿಸಿದ್ದರು. ಆದರೆ ಮಾರನೇ ದಿನ ನಾನು ಹೇಳಿಲ್ಲ ಎಂದರು. ದೇವೇಗೌಡರು ಏಕೆ ಹಾಗೆ ಹೇಳಿದರು ಅಂತ ಗೊತ್ತಿಲ್ಲ. ಇದರಿಂದಾಗಿ ಮೈತ್ರಿ ಮುರಿದು ಬಿದ್ದಿದ್ದಕ್ಕೆ ಸಿಎಂ ಬಳಿ ಕ್ಷಮೆಯಾಚಿಸಿದ್ದೇವೆ ಎಂದು ತಿಳಿಸಿದರು.
ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಚೆಲುವರಾಯಸ್ವಾಮಿ ಹಾಗೂ ಜಮೀರ್ ಅಹಮ್ಮದ್ ಖಾನ್ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಹಾಗೂ ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚಿಸಿದ್ದರು.
Advertisement