ಮೈಸೂರು: ಈ ಬಾರಿಯ ಜಂಬೂಸವಾರಿ ಉತ್ಸವವನ್ನು ಆಯುಧ ಪೂಜೆಯಂದೇ ಆಚರಿಸುವ ಸರ್ಕಾರದ ದಿಢೀರ್ ನಿರ್ಧಾರಕ್ಕೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಅವರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ಅಲ್ಲದೇ ಸರ್ಕಾರದ ಈ ನಿರ್ಧಾರದಿಂದ ರಾಜ್ಯ ಪ್ರವಾಸೋದ್ಯಮಕ್ಕೆ ಪೆಟ್ಟು ಬೀಳಲಿದೆ ಎಂದು ಹೋಟೆಲ್ ಉದ್ಯಮಿಗಳೂ ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಮೋದಾದೇವಿ ಮಾತನಾಡಿ, ``ದಸರೆ ಗಾಗಿ ಅರಮನೆಯ ಒಳಗೆ ಈಗಾಗಲೇ ತಯಾರಿ ನಡೆದಿದೆ. ಆಯುಧ ಪೂಜೆ ದಿನದಂದೇ ದಸರಾ ಮೆರವಣಿಗೆ ಮಾಡಲು ಸರ್ಕಾರ ಏಕಾಏಕಿ ನಿರ್ಧರಿಸಿರುವುದೇಕೆ ಎಂಬುದೇ ಅರ್ಥವಾಗುತ್ತಿಲ್ಲ. ದಸರಾ ಖಾಸಗಿ ಆಚರಣೆಗಳಿಗೆ ಅಡಚಣೆಯಾಗಲಿದೆ'' ಎಂದಿದ್ದಾರೆ. ``ಅ.22 ರಂದು ಅರಮನೆಯೊಳಗೆ ಬೆಳಗ್ಗೆ 6 ರಿಂದ ಸಂಜೆ 7 ರವರೆಗೆ ಹಲವು ಪೂಜೆ, ಕಾರ್ಯಕ್ರಮಗಳು ನಡೆಯುತ್ತವೆ.
ಮೆರವಣಿಗೆಗಾಗಿ ಪೊಲೀಸ್ ಭದ್ರತೆ ಹೆಚ್ಚಿಸಲಾಗುತ್ತದೆ. ಇದರಿಂದ ಅರಮನೆ ಪೂಜೆ ಮತ್ತು ಕಾರ್ಯಕ್ರಮಗಳು ಸಾಂಗವಾಗಿ ನಡೆಯುವುದಿಲ್ಲ. ಸರ್ಕಾರದಿಂದ ನಡೆಯುವ ಉತ್ಸವದಲ್ಲಿ ಯಾವುದೇ ಪೂಜಾ ಕಾರ್ಯಕ್ರಮಗಳು ಇರುವುದಿಲ್ಲ. ನಾವು ಅರಮನೆಯೊಳಗೆ ಸಾಂಪ್ರದಾಯಿಕವಾಗಿ ಸಾಕಷ್ಟು ಶಾಸ್ತ್ರ, ಪೂಜೆಗಳನ್ನು ನಡೆಸುತ್ತೇವೆ'' ಎಂದು ಅವರು ಹೇಳಿದ್ದಾರೆ.
ಉದ್ಯಮಕ್ಕೆ ಪೆಟ್ಟು?
``ಆಯುಧಪೂಜೆ ಹಾಗೂ ವಿಜಯದಶಮಿ ದಿನದಂದು ಮೈಸೂರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಈಗಾಗಲೇ ಹೋಟೆಲ್ಗಳನ್ನು ಕಾದಿರಿಸಿದ್ದಾರೆ. ಹೀಗಿರುವಾಗ ಈ ರೀತಿ ಗೊಂದಲ ಮೂಡಿಸಿದರೆ ಪ್ರವಾಸೋದ್ಯಮಕ್ಕೆ ಹೊಡೆತ ಬೀಳುತ್ತದೆ'' ಎಂದು ಹೋಟೆಲ್ ಉದ್ಯಮಿ, ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಹೇಳಿದ್ದಾರೆ.
Advertisement