ಮುಂಬೈ: ಜಿನ್ನಾ ವಾಸವಾಗಿದ್ದ ಮುಂಬೈ ಮನೆಯಲ್ಲಿ ಪಾಕಿಸ್ತಾನಿ ರಾಯಭಾರಿ ಕಚೇರಿಯನ್ನು ಪ್ರಾರಂಭಿಸಲು ಒತ್ತಡವನ್ನು ಮುಂದುವರೆಸುವುದಾಗಿ ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಖುರ್ಷಿದ್ ಮಹಮೂದ್ ಕಸೂರಿ ಹೇಳಿದ್ದಾರೆ.
ಪಾಕಿಸ್ತಾನದ ಕರಾಚಿಯಲ್ಲೂ ಭಾರತದ ರಾಯಭಾರಿ ಕಚೇರಿಯನ್ನು ಮತ್ತೆ ತೆರೆಯಲು ಬೆಂಬಲಿಸುವುದಾಗಿ ಹೇಳಿದ್ದಾರೆ.
"ನಾನು ವಿದೇಶಾಂಗ ಸಚಿವನಾಗಿದ್ದ ಸಮಯದಲ್ಲಿ (೨೦೦೨-೦೭) ಜಿನ್ನಾ ಮನೆಯಲ್ಲಿ ಪಾಕಿಸ್ತಾನ ರಾಯಭಾರ ಕಚೇರಿ ತೆರೆಯಲು ಪ್ರತ್ನಿಸಿದ್ದೆ, ಈ ಗುರಿ ಮುಟ್ಟಲು ಪ್ರಯತ್ನವನ್ನು ಮುಂದುವರೆಸುತ್ತೇನೆ.
"ಹಾಗೆಯೇ ಕರಾಚಿಯಲ್ಲಿ ಭಾರತೀಯ ಕಚೇರಿಯನ್ನು ಮತ್ತೆ ತೆರೆಯಬೇಕು" ಎಂದು ಪಾಕಿಸ್ತಾನದ ಜನಕ ಮೊಹಮ್ಮದ್ ಅಲಿ ಜಿನ್ನಾ ವಾಸವಾಗಿದ್ದ ಮಲಬಾರ್ ಬೆಟ್ಟದ ಮನೆಗೆ ಭೇಟಿ ಕೊಟ್ಟ ವೇಳೆಯಲ್ಲಿ ತಿಳಿಸಿದ್ದಾರೆ.
೧೯೫೫ ರಲ್ಲಿ ಕರಾಚಿಯ ಭಾರತೀಯ ರಾಯಭಾರಿ ಕಚೇರಿಯನ್ನು ಪಾಕಿಸ್ತಾನ ಸರ್ಕಾರ ಮುಚ್ಚಿತ್ತು.
"ನಾನು ಇಲ್ಲಿಗೆ ಶಾಂತಿಯ ಸಂದೇಶಕನಾಗಿ ಬಂದಿದ್ದೆ ಆದರೆ ನೆನ್ನೆ ಪ್ರತಿಭಟನೆಗಳನ್ನು ಎದುರಿಸಿದೆ. ಆದರೆ ನನಗೆ ಅಗತ್ಯ ಭದ್ರತೆ ನೀಡಿ ಯಾವುದೇ ಅಹಿತಕರ ಘಟನೆ ಆಗದಂತೆ ನೋಡಿಕೊಂಡದ್ದಕ್ಕೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೆಂದ್ರ ಫಡ್ನವಿಸ್ ಅವರಿಗೆ ಶ್ರೇಯಸ್ಸು ಸಲ್ಲಬೇಕು.
"ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಶಾಂತಿಗಾಗಿ ಶ್ರಮಿಸಿದ ಮೂವರಿದ್ದಾರೆ-ಮಹಾತ್ಮ ಗಾಂಧಿ, ಜಿನ್ನಾ ಮತ್ತು ದಿಲೀಪ್ ಕುಮಾರ್. ಆದುದರಿಂದ ಅವರಿಗೆ ಸಂಬಂಧಿಸಿದ ಜಾಗಗಳಿಗೆ ಭೇಟಿ ನೀಡಿದೆ" ಎಂದು ಅವರ ಪುಸ್ತಕ 'ನೀದರ್ ಎ ಹಾಕ್ ನಾರ್ ಎ ಡವ್' ಬಿಡುಗಡೆಗಾಗಿ ಭಾರತಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೇಳಿದ್ದಾರೆ.
Advertisement